ಬೆಂಗಳೂರು: ಪಾಗಲ್ ಪ್ರೇಮಿಯ ಕಾಟಕ್ಕೆ ಬೇಸತ್ತು ವಿವಾಹಿತೆ ಆತ್ಮಹತ್ಯೆಗೆ ಶರಣಾದ ಘಟನೆ ಇಂದಿರಾನಗರದ ಲಕ್ಷ್ಮೀಪುರಂನಲ್ಲಿ ನಡೆದಿದೆ. ಆ.6 ರಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಕವಿತಾ (21) ಆತ್ಮಹತ್ಯೆಗೆ ಶರಣಾದ ಮಹಿಳೆ. ಮಹಿಳೆಗೆ 2024 ರಲ್ಲಿ ಮದುವೆಯಾಗಿದ್ದು 1.5 ವರ್ಷದ ಮಗು ಸಹ ಇತ್ತು. ಇತ್ತೀಚೆಗೆ ಮಹಿಳೆ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಪೊಲೀಸ್ ತನಿಖೆ ವೇಳೆ ಪಾಗಲ್ ಪ್ರೇಮಿಯ ಕಾಟ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟ ಆರೋಪದ ಮೇಲೆ ಪಾಗಲ್ ಪ್ರೇಮಿ ಕಿರಣ್ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಆಸ್ಟನ್ ಮಾರ್ಟಿನ್ ಕಾರು ಡಿಕ್ಕಿ, ಯುವತಿ ಸಾವು; ರಾಜ್ಯಸಭಾ ಎಂಪಿ ಪುತ್ರನ ವಿರುದ್ದ ಕೇಸ್ ದಾಖಲು
ಆರೋಪಿ 3 ವರ್ಷದ ಹಿಂದೆ ಪ್ರೀತಿಸೋದಾಗಿ ಕಿರಣ್, ಕವಿತಾ ಹಿಂದೆ ಬಿದ್ದಿದ್ದ. ಕಿರಣ್ಗೆ ಕವಿತಾ ಕುಟುಂಬಸ್ಥರು ಬುದ್ದಿವಾದ ಹೇಳಿದ್ದರು. ಬಳಿಕ 2024ರಲ್ಲಿ ಆಕೆಗೆ ರಾಜು ಎಂಬವರ ಜೊತೆ ಮದುವೆ ಮಾಡಲಾಗಿತ್ತು. ಮದುವೆ ಬಳಿಕವೂ ಕಿರಣ್, ಕವಿತಾಗೆ ಮೆಸೇಜ್ ಮಾಡಿ ಕಾಟ ಕೊಡಲು ಆರಂಭಿಸಿದ್ದ. ಮೆಸೇಜ್ ಮಾಡದಿದ್ರೆ ಸಾಯುತ್ತೇನೆ. ನನ್ನ ನೆಮ್ಮದಿ ಹಾಳು ಮಾಡಿದ ನಿನ್ನ ಜೀವನ ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.
ಈ ವಿಚಾರವನ್ನ ಕವಿತಾ ಪೋಷಕರಿಗೆ ಪತಿ ರಾಜು ಹೇಳಿದ್ದರು. ಗಂಡ ,ಮನೆಯವರಿಗೆ ವಿಷಯ ಗೊತ್ತಾಯಿತು ಅಂತ ಕವಿತಾ ನೊಂದಿದ್ದರು. ಇದರಿಂದ ಆತ್ಮಹತ್ಯೆಗೆ ಶರಣಾಗಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಪತಿ ಕುಟುಂಬಸ್ಥರಿಂದ ಕಿರುಕುಳ – ಮಗುವನ್ನು ಕೊಂದು ನೇಣಿಗೆ ಶರಣಾದ ಮಹಿಳೆ

