ಚಿಕ್ಕಬಳ್ಳಾಪುರ: ಕೇತುಗ್ರಸ್ಥ ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳ ಬಾಗಿಲು ಬಂದ್ ಮಾಡಿದರೆ, ಚಿಕ್ಕಬಳ್ಳಾಪುರ ನಗರದ ಮರಳುಸಿದ್ದೇಶ್ವರ ಸ್ವಾಮಿ ದೇವಾಲಯದ ಬಾಗಿಲು ಎಂದಿನಂತೆ ತೆರೆದಿದೆ.
ಗ್ರಹಣ ಸ್ಪರ್ಶ ಕಾಲ ಆರಂಭವಾಗುತ್ತಿದ್ದಂತೆ ದೇವಾಲಯದ ಆವರಣದಲ್ಲಿ ಗ್ರಹಣ ದೋಷ ನಿವಾರಣಾ ಹೋಮ ನೆರವೇರಿಸಲಾಗುತ್ತಿದೆ. ಹೋಮ ಹವನದಲ್ಲಿ ಭಕ್ತರು ಪಾಲ್ಗೊಂಡು ಹೋಮ ಕುಂಡಕ್ಕೆ ದವಸಧಾನ್ಯ, ನವಧಾನ್ಯಗಳನ್ನ ಅರ್ಪಣೆ ಮಾಡಿ ಗ್ರಹಣ ದೋಷ ನಿವಾರಣೆಗೆ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಗ್ರಹಣದ ಸಮಯದಲ್ಲಿ ದೇವಾಲಯದ ಬಾಗಿಲು ಮುಚ್ಚಿ ದೇವರಿಗೆ ದಿಗ್ಬಂಧನ ವಿಧಿಸಿ ಗ್ರಹಣ ಸಮಯದ ನಂತರ ಎಲ್ಲಾ ದೇವಾಲಯಗಳ ಬಾಗಿಲು ತೆರೆದರೆ ಈ ದೇವಾಲಯದಲ್ಲಿ ಮಾತ್ರ ಗ್ರಹಣ ಸಮಯದಲ್ಲೇ ಹೋಮ-ಹವನ, ಪೂಜೆ ಕೈಂಕರ್ಯಗಳು ನೆರವೇರುತ್ತಿದ್ದು ಗ್ರಹಣ ಮೋಕ್ಷ ಕಾಲದ ನಂತರ ದೇವಾಲಯದ ಬಾಗಿಲು ಬಂದ್ ಆಗಲಿದೆ.
ಈಶ್ವರನಿಗೆ ಗ್ರಹಣದ ಎಫೆಕ್ಟ್ ಇರುವುದಿಲ್ಲ ಹಾಗೂ ಗ್ರಹಣದ ಸಮಯದಲ್ಲಿ ಹೋಮ ಹವನ ಮಾಡುವುದರಿಂದ ಗ್ರಹಣ ದೋಷ ನಿವಾರಣೆಯಾಗಲಿದೆ ಎಂದು ದೇವಾಲಯದ ಅರ್ಚಕರು ಹೇಳುತ್ತಾರೆ.