ಉಡುಪಿ: ಭಾನುವಾರ ತಡರಾತ್ರಿ ಉಡುಪಿ ಜಿಲ್ಲೆಯಾದ್ಯಂತ ಸುರಿದ ಬಿರುಗಾಳಿ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಗುಡುಗು ಸಿಡಿಲಿನಿಂದ ಕೂಡಿದ ಗಾಳಿ ಮಳೆಗೆ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಭಾರೀ ಗಾಳಿಗೆ ವಿದ್ಯುತ್ ಕಂಬಗಳೂ ಬಿದ್ದಿದೆ. ಪರಿಣಾಮ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.
ಶಿರಿಬೀಡು ಸಮೀಪ ಕೆಲವು ಮನೆಗಳಿಗೆ ನೀರು ನುಗ್ಗಿದೆ. ದೊಡ್ಡಣಗುಡ್ಡೆಯಲ್ಲಿ ನೂರಾರು ಮರಗಳು ರಸ್ತೆಗೆ ಬಿದ್ದಿದ್ದು ಇದರಿಂದ ಸಂಚಾರ ಅಸ್ತವ್ಯಸ್ಥಗೊಂಡಿದೆ. ತಡರಾತ್ರಿಯ ಬಿರುಗಾಳಿ ಮಳೆ ರೌದ್ರಾವತಾರ ತೋರಿತ್ತು. ಉಡುಪಿಯ ಜನತೆ ಬಂದ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಬಂದ್ ಗೆ ಜಿಲ್ಲಾ ಬಿಜೆಪಿ ಬೆಂಬಲ ವ್ಯಕ್ತಪಡಿಸಿದ್ದರೂ, ಅಂಗಡಿ ಮುಂಗಟ್ಟುಗಳು ಬಹುತೇಕ ತೆರೆದಿವೆ.
ಬ್ರಹ್ಮಗಿರಿ, ಅಂಬಾಗಿಲುವಿನಲ್ಲಿ ಮರಗಳು ಉರುಳಿದ್ದು, ಟ್ರಾನ್ಸ್ ಫಾರ್ಮರ್ ಕೂಡ ರಸ್ತೆಗೆ ಉರುಳಿದೆ. ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಜಿಲ್ಲೆಯಲ್ಲಿ ಉರುಳಿ ವಿದ್ಯುತ್ ವ್ಯತ್ಯಯವಾಗಿದೆ. ಮಳೆಯಿಂದ ಮೆಸ್ಕಾಂ ಸಿಬ್ಬಂದಿಗಳು ಪರದಾಟ ನಡೆಸುತ್ತಿದ್ದಾರೆ.