ಬೆಂಗಳೂರು: ಕೈಮುಗಿದು ಹೇಳುತ್ತೇನೆ ಯುವಕರೇ ಟೋಲ್ ಕಟ್ಟಬೇಡಿ, FIR ಗೆ ಹೆದರಬೇಡಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕರೆ ನೀಡಿದ್ದಾರೆ.
ನೈಸ್ ರಸ್ತೆಯ ಟೋಲ್ ಸಂಗ್ರಹ ವಿಚಾರವಾಗಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೈಸ್ ಸಂಸ್ಥೆ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಸಾರ್ವಜನಿಕರು ಟೋಲ್ ಪಾವತಿಸದಂತೆ ಕರೆ ನೀಡಿದ್ದಾರೆ.
ಜನರಿಗೆ ಕೈಮುಗಿದು ಹೇಳುತ್ತೇನೆ, ನೈಸ್ ಟೋಲ್ ಕಟ್ಟಬೇಡಿ. ಯುವಕರೇ ಟೋಲ್ ಕಟ್ಟಬೇಡಿ. ಎಫ್ಐಆರ್ ಹಾಕಿದರೂ ಹೆದರಬೇಡಿ ಎಂದು ಕರೆ ನೀಡಿದ್ದಾರೆ.

2,000 ಕೋಟಿ ಸಂಗ್ರಹ
ನೈಸ್ ಸಂಸ್ಥೆಯಿಂದ ಇದುವರೆಗೆ ಸುಮಾರು 2,000 ಕೋಟಿ ಟೋಲ್ ಸಂಗ್ರಹಿಸಲಾಗಿದೆ. ನ್ಯಾಯಾಲಯದ ಆದೇಶಗಳು ಮತ್ತು ನೈಸ್ ಯೋಜನೆಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯ ಆರೋಪಗಳಿದ್ದರೂ ಸರ್ಕಾರ ಮೌನ ವಹಿಸಿರುವುದು ಏಕೆ? ಕೋರ್ಟ್ ಹೇಳಿದ ಮೇಲೂ ಸರ್ಕಾರ ಜಾಣ ಮೌನ ವಹಿಸಿರುವುದು ಯಾಕೆ? ಸರ್ಕಾರಕ್ಕೂ ನೈಸ್ ಸಂಸ್ಥೆಗೂ ಏನು ಸಂಬಂಧ? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ.

ನೈಸ್ ನೋಟಿಸ್ ವಿಚಾರಕ್ಕೆ ಕಿಡಿ
ಸಾರ್ವಜನಿಕರಿಗೆ ನೈಸ್ ಸಂಸ್ಥೆ ನೋಟಿಸ್ ಅಂಟಿಸಿರುವ ವಿಚಾರಕ್ಕೂ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೊದಲು ಸುಪ್ರೀಂ ಕೋರ್ಟ್ ಆದೇಶವನ್ನೂ ಅಲ್ಲಿ ಹಾಕಿ. ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ಟೋಲ್ ದರವನ್ನು ಬೇಕಾಬಿಟ್ಟಿಯಾಗಿ ಹೆಚ್ಚಿಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮುಂದಿಟ್ಟಿದ್ದು, ನ್ಯಾಯಾಲಯದ ಆದೇಶಗಳಿದ್ದರೂ ಸರ್ಕಾರ ಟೋಲ್ ಸಂಗ್ರಹವನ್ನು ನಿಲ್ಲಿಸಲು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಹಗಲು ದರೋಡೆಗೆ ಅವಕಾಶ ಕೊಡಬೇಡಿ
ನೈಸ್ ಸಂಸ್ಥೆ ಮತ್ತು ಸರ್ಕಾರದ ವಿರುದ್ಧ ಜನರು ಧ್ವನಿ ಎತ್ತಬೇಕು. ಕಾನೂನುಬಾಹಿರವಾಗಿ ಹಗಲು ದರೋಡೆ ಮಾಡುವುದಕ್ಕೆ ಅವಕಾಶ ಕೊಡಬೇಡಿ. ಎಫ್ಐಆರ್ಗೆ ಹೆದರಬೇಡಿ. ಡಿಕೆ ಶಿವಕುಮಾರ್ ಅವ್ರೇ ನೀವು ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದೀರಾ? ಅಥವಾ ನೈಸ್ ಕಂಪನಿಯ ಮಾಲೀಕರೇ ಸರ್ಕಾರ ನಡೆಸುತ್ತಿದ್ದಾರಾ? ಎಂದು ಟೀಕಿಸಿದ್ದಾರೆ.

