– ಬಿಜೆಪಿಯವರು ವೋಟಿಗಾಗಿ ಈ ರೀತಿ ಹೇಳುತ್ತಾರೆ
ಹಾವೇರಿ: ಭಾರತಕ್ಕೆ ಪಾಕಿಸ್ತಾನ ಸೇರಿಸುತ್ತೇವೆ ಅನ್ನೋ ಬಿಜೆಪಿ ನಾಯಕರ ಹೇಳಿಕೆ ಸಂತೋಷದ ವಿಚಾರ. ಆದರೆ ಜನರನ್ನು ಮೂರ್ಖರನ್ನಾಗಿ ಮಾಡಬೇಡಿ. ಮೊದಲು ಆ ಕೆಲಸವನ್ನ ಮಾಡಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ದಾವೂದ್ ಇಬ್ರಾಹಿಂ ನನ್ನ ಇಪ್ಪತ್ತು ನಾಲ್ಕು ಗಂಟೆಯಲ್ಲಿ ಹಿಡಿದು ತರುತ್ತೇವೆ ಎಂದಿದ್ದರು. ಎಲ್ಲಿ ಹಿಡಿದು ತಂದರು. ಹೀಗಂತ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಇಂಥಾ ಹೇಳಿಕೆ ನೀಡುತ್ತಿದ್ದಾರೆ. ಈಗ ನಾಲ್ಕು ರಾಜ್ಯಗಳ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಈ ರೀತಿ ಹೇಳುತ್ತಿದ್ದಾರೆ ಎಂದರು.
ಬಿಜೆಪಿಯವರು ವೋಟಿಗಾಗಿ ಈ ರೀತಿ ಹೇಳುತ್ತಾರೆ. ನಿಮಗೆ ಭಾರತ ಮಾತೆ ಮೇಲೆ ನಿಜವಾದ ಪ್ರೀತಿ ಇದ್ದರೆ ಮೊದಲು ಆ ಕೆಲಸವನ್ನ ಮಾಡಿ. ಅಖಂಡ ಭಾರತಕ್ಕೆ ನಮ್ಮ ಒತ್ತಾಯವಿದೆ. ಪಾಕಿಸ್ತಾನ ಭಾರತಕ್ಕೆ ಸೇರಿಸುತ್ತೇವೆ ಎಂದು ಅಲ್ಲಿಗೆ ಹೋಗಿ ಬಿರಿಯಾನಿ ತಿಂದು ಬರುವುದಲ್ಲ ಎಂದು ಬಿಜೆಪಿ ವಿರುದ್ಧ ಛಾಟಿ ಬೀಸಿದರು. ನಮ್ಮ ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಇದೆ. ನಮ್ಮಲ್ಲಿ ನಾಯಕತ್ವದ ಕೊರತೆ ಇಲ್ಲ. ನಮ್ಮಲ್ಲಿ ವಿಚಾರ ಹಂಚಿಕೊಳ್ಳುವ ಶಕ್ತಿ ಇದೆ. ಬೇರೆ ಪಕ್ಷದಲ್ಲಿ ಮಾತನಾಡಲು ಧಮ್ ಇಲ್ಲ ಎಂದು ಹೇಳಿದರು.
ನೆರೆ ಪರಿಹಾರದ ವಿಚಾರಕ್ಕೆ ಸಂಬಂಧಿಸಿದಂತೆ ತುರ್ತಾಗಿ ಅಧಿವೇಶನ ಕರೆಯಬೇಕಿತ್ತು. ಸರ್ವಪಕ್ಷ ನಿಯೋಗ ಒಯ್ಯಬೇಕಿತ್ತು. ನಮ್ಮ ರಾಜ್ಯದ ಸಿಎಂಗೆ ಪಿಎಂ ಬಳಿ ಮಾತನಾಡಲು ಅವಕಾಶ ಸಿಗುವುದಿಲ್ಲ. ಒಬ್ಬ ಸಂಸದರು ಪರಿಹಾರದ ಬಗ್ಗೆ ಮಾತನಾಡುತ್ತಿಲ್ಲ ಇದು ನಾಚಿಕೆಯ ವಿಷಯ. ಜನರು ಕಣ್ಣೀರು ಹಾಕುತ್ತಿದ್ದರೂ ಬಿಜೆಪಿ ಸಂಸದರಿಗೆ ಮಾತನಾಡಲು ಧಮ್ ಇಲ್ಲ. ಸಂಸದರು ಜನರಿಗೆ ಹೆದರಬೇಕು. ಪ್ರಧಾನಿಗೆ, ಅಮಿತ್ ಶಾಗೆ ಹೆದರಬೇಕಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಡಿಕೆಶಿ ವಿಚಾರದಲ್ಲಿ ಪಕ್ಷದ ನಾಯಕರು ಮತ್ತು ಪಕ್ಷ ಮತ್ತು ಅವರ ಜೊತೆಗಿದೆ ಎಂದು ಹೇಳಿದರು.