ಹಾವೇರಿ: ರಾಣೇಬೆನ್ನೂರು ಅನರ್ಹ ಶಾಸಕ ಆರ್.ಶಂಕರ್ ಮೈತ್ರಿ ಸರ್ಕಾರ ರಚನೆ ಹಾಗೂ ಮೈತ್ರಿ ಸರ್ಕಾರ ಪತನಗೊಳ್ಳಲು ಮುಖ್ಯ ಪಾತ್ರವಹಿಸಿದ್ದರು. ಈಗ ಬಿಜೆಪಿ ಸರ್ಕಾರ ರಚನೆ ಆಗುವಲ್ಲಿ ಅತೃಪ್ತರ ಗುಂಪು ಸೇರಿ ಬಿಜೆಪಿ ಪಕ್ಷಕ್ಕೆ ಜೈ ಎಂದರು. ಸರ್ಕಾರ ರಚನೆಯಲ್ಲಿ ಮತ್ತು ಪತನಕ್ಕೆ ಕಾರಣವಾದ ಪಕ್ಷೇತರ ಶಾಸಕ ಆರ್.ಶಂಕರ್ ಅನರ್ಹ ಶಾಸಕನಾಗಿದ್ದು, ಇತ್ತ ಬಿಜೆಪಿ ಪಕ್ಷದ ಟಿಕೆಟ್ ಇಲ್ಲದೆ ಏಕಾಂಗಿಯಾಗಿದ್ದಾರೆ.
ರಾಣೆಬೆನ್ನೂರು ಕ್ಷೇತ್ರದ ಶಾಸಕ ಆರ್.ಶಂಕರ್ ಅನರ್ಹಗೊಂಡು ಉಪಚುನಾವಣೆ ಘೋಷಣೆ ಆಗಿದೆ. ಆರ್.ಶಂಕರ್ ಬೆಂಗಳೂರಿನಿಂದ 2013ರಲ್ಲಿ ಕ್ಷೇತ್ರಕ್ಕೆ ಆಗಮಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ನಂತರ 2018ಕ್ಕೆ ಮತ್ತೆ ರಾಣೇಬೆನ್ನೂರು ಕ್ಷೇತ್ರದಿಂದ ಕೆ.ಪಿ.ಜೆ.ಪಿ ಪಕ್ಷದಿಂದ ಸ್ಪರ್ಧೆ ಮಾಡಿ ಸುಮಾರು 3 ಸಾವಿರ ಮತಗಳಿಂದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಗೆದ್ದ ಮೇಲೆ ಅವರಿಗೆ ಜಾಕ್ಪಾಟ್ ಹೊಡೆಯಿತು. ಮೈತ್ರಿ ಸರ್ಕಾರ ರಚನೆ ಮಾಡುವಲ್ಲಿ ಆರ್.ಶಂಕರ್ ಪ್ರಮುಖ ಪಾತ್ರವಹಿಸಿ ಅರಣ್ಯ ಸಚಿವರಾಗಿ ಕ್ಷೇತ್ರಕ್ಕೆ ಆಗಮಿಸಿದರು. ರಾಜಕೀಯ ಆಟದಲ್ಲಿ ಒಂದು ಕಡೆ ನಿಲ್ಲದ ಅವರು ಒಂದು ಬಾರಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದರೆ, ಮತ್ತೊಂದು ಕಡೆ ಕಾಂಗ್ರೆಸ್ ಹಾರಿದರು. ಇದು ಕ್ಷೇತ್ರದ ಜನರ ಸಿಟ್ಟಿಗೆ ಕಾರಣವಾಗಿದ್ದು, ಶಾಸಕರ ನಡೆಗೆ ಬೇಸತ್ತು ಹೋಗಿದ್ದಾರೆ.
ಕಾಂಗ್ರೆಸ್ ಕೋಟಾದಲ್ಲಿ ಪೌರಾಡಳಿತ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಮತ್ತೆ ಆಪರೇಷನ್ ಕಮಲಕ್ಕೆ ಒಳಗಾಗಿ ಮುಂಬೈಗೆ ಹಾರಿ ಕಾಂಗ್ರೆಸ್ ಪಕ್ಷ ಅನರ್ಹಗೊಳಿಸಿತು. ಈಗ ಸುಪ್ರೀಂಕೋರ್ಟ್ ಚುನಾವಣೆ ಸ್ವರ್ಧೆ ಮಾಡಬಹುದು ಅಂತ ತೀರ್ಪು ನೀಡಿದೆ. ಆದರೆ ರಾಣೇಬೆನ್ನೂರಲ್ಲಿ ಶಂಕರ್ ಗೆಲ್ಲಲ್ಲ. ಅವರಿಗೆ ಟಿಕೆಟ್ ಬೇಡ ಅಂತ ಬೇರೊಬ್ಬರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. ಹೀಗಾಗಿ, ಶಂಕರ್ ತಮ್ಮ ರಾಜಕೀಯ ಭವಿಷ್ಯ ಸಮಾಧಿ ಮಾಡಿಕೊಂಡಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಕಳೆದ 10 ವರ್ಷಗಳ ಹಿಂದೆ ರಾಣೇಬೆನ್ನೂರು ಕ್ಷೇತ್ರಕ್ಕೆ ಆಗಮಿಸಿದ್ದ ಶಂಕರ್ ಪಕ್ಷೇತರನಾಗಿ ಗೆದ್ದಿದ್ದೇ ದಾಖಲೆಯಾಗಿದೆ. ಅಂಥದ್ದರಲ್ಲಿ ಜಂಪಿಂಗ್ ಸ್ಟಾರ್ ಆಗಿ ಈಗ ತ್ರಿಶಂಕು ಸ್ಥಿತಿಗೆ ತಲುಪಿರೋದು ವಿಪರ್ಯಾಸವಾಗಿದೆ.