– RSS ದೇಶಕ್ಕಾಗಿ ತಮ್ಮನ್ನು ಸಮರ್ಪಣೆ ಮಾಡ್ಕೊಂಡ ಸಂಘಟನೆ
ಕೊಪ್ಪಳ: ಬಾಯಿಗೆ ಬಂದಂತೆ ಮಾತನಾಡಲು ಜನರು ನಮ್ಮನ್ನು ಆಯ್ಕೆ ಮಾಡಿಲ್ಲ ಎಂದು ಶಾಸಕ ಅಮರೇಗೌಡ ಬಯ್ಯಾಪೂರ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಕಿಡಿಕಾಡಿದ್ದಾರೆ.
ಬಿಜೆಪಿ ಮುಖಂಡರು ಸತ್ತರೆ 1 ಕೋಟಿ ರೂ. ಕೊಡುತ್ತೇವೆ ಎಂಬ ಅಮರೇಗೌಡ ಬಯ್ಯಾಪೂರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರ ವಯಸ್ಸು ಮತ್ತು ಅನುಭವಕ್ಕೆ ತಕ್ಕ ಮಾತು ಇದಲ್ಲ. ಹಿರಿಯರು ಜವಾಬ್ದಾರಿಯಿಂದ ಮಾತನಾಡಬೇಕು. ಜನರು ವಿಶ್ವಾಸ ಇಟ್ಟು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಲು ಜನರು ನಮ್ಮನ್ನು ಆಯ್ಕೆ ಮಾಡಿಲ್ಲ. ಕೆಲವರು ಅಧಿಕಾರ ಕಳೆದುಕೊಂಡು, ಕೆಲವರು ಅಧಿಕಾರದಲ್ಲಿ ಇದ್ದು ಜವಾಬ್ದಾರಿ ಮರೆಯುತ್ತಿದ್ದಾರೆ. ಇದೇ ಕಾಂಗ್ರೆಸ್ ಸಂಸ್ಕೃತಿ ಎಂಬುದು ನನ್ನ ಅಭಿಪ್ರಾಯ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಮುಖಂಡರು ಯಾರೇ ಸಾಯ್ಲಿ ಕಾಂಗ್ರೆಸ್ಸಿನಿಂದ 1 ಕೋಟಿ ರೂ.: ಬಯ್ಯಾಪೂರ
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ RSS ಕುರಿತು ಮಾತನಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, RSS ಎಂದರೆ ದೇಶಕ್ಕಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಸಂಘಟನೆ. ಮಾಜಿ ಪಿಎಂ ಎಚ್.ಡಿ.ದೇವೆಗೌಡರಿಗೆ RSS ಬಗ್ಗೆ ಗೊತ್ತು. RSS ಬಗ್ಗೆ ಎಚ್ಡಿಡಿ ಒಳ್ಳೆಯ ಮಾತಾಡಿದ್ದಾರೆ. ಇದನ್ನೆಲ್ಲ ಕುಮರಸ್ವಾಮಿ ಅವರು ಮರೆಯುತ್ತಾರೆ ಎಂದರೆ ಅವರಿಗೆ ಏನೂ ಹೇಳೊಕ್ಕಾಗಲ್ಲ ಎಂದಿದ್ದಾರೆ.
RSS ಅವರೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗುತ್ತಾರೆ ಎಂಬ ವಿಚಾರವಾಗಿ ಮಾತನಾಡಿ ಅವರು, ಕಾಂಗ್ರೆಸ್ ಅವರೂ ಹಿಂದೆ ಹೀಗೇ ಮಾಡಿದ್ರಾ? ನೀವು ನಿಮಗೆ ಬೇಕಾದವರನ್ನು ಆಯ್ಕೆ ಮಾಡಿದ್ರಾ? ಇವೆಲ್ಲ ಅಟೋನೊಮಸ್ ಬಾಡಿ ಇವೆ. ಇವು ದೇಶದ ಪ್ರತಿಷ್ಠೆ ಹೆಚ್ಚಿಸಿದ ಸಂಸ್ಥೆಗಳು. ಅಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ. ಇದರ ಬಗ್ಗೆ ಈ ರೀತಿ ಮಾತಾಡಿದ್ರೆ ಏನು? ಮುಂದಿನ ಪೀಳಿಗೆಗೆ ನಾವು ಏನು ಕೊಡುತ್ತೇವೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ವಿರುದ್ಧ ಪ್ರಕರಣ ದಾಖಲು
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಉಮೇಶ್ ಮೇಲೆ ಐಟಿ ರೇಡ್ ವಿಚಾರಕ್ಕೆ ಹೆಚ್ಡಿಕೆ ಇದು ಟಾರ್ಗೆಟ್ ಬಿಎಸ್ ವೈ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಕಾಲಕಾಲಕ್ಕೆ ಐಟಿ ರೇಡ್ ಆಗಿವೆ. ಎಲ್ಲದಕ್ಕೂ ಒಂದು ಕಲ್ಪನೆ ಕಟ್ಟಿಕೊಂಡು ಬಂದರೆ ಏನೂ ಮಾಡೊಕ್ಕಾಗಲ್ಲ. ಐಟಿ ಅಧಿಕಾರಿಗಳು ತಮ್ಮ ಸಾಕ್ಷಾಧಾರ ಇಟ್ಟುಕೊಂಡು ದಾಳಿ ಮಾಡ್ತಾರೆ. ಇದು ಕುಮಾರಸ್ವಾಮಿ ಅವರ ಹೊಸ ನಾಟಕ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.