ಮೈಸೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿಚಾರದಲ್ಲಿ ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ (S A Ramdas) ಕೊನೆಗೂ ಮೌನ ಮುರಿದಿದ್ದಾರೆ. ಬಸ್ ತಂಗುದಾಣ ಪಾರಂಪರಿಕವಾಗಿ ಕಾಣುವ ದೃಷ್ಟಿಯಿಂದ ನಿರ್ಮಿಸಲಾಗುತ್ತಿದಯೇ ಹೊರತು ಯಾವುದೇ ಧರ್ಮದ ಆಧಾರದ ಮೇಲೆ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತಜ್ಞರ ಸಮಿತಿಗೆ ಒತ್ತಾಯಿಸಿದ್ದಾರೆ.
ಸಮಿತಿಯವರು ಬಂದು ನೋಡಿ ವರದಿ ನೀಡಲು ಮನವಿ ಮಾಡಿದ್ದು, ವರದಿಯಲ್ಲಿ ತಪ್ಪಿದೆ ಎಂದು ತಿಳಿಸಿದ್ದಲ್ಲಿ ಬದಲಾವಣೆ ಮಾಡಲು ನಮ್ಮದೇನು ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ. ಮೈಸೂರು (Mysuru) ಪಾರಂಪರಿಕ ನಗರಿ. ಇದರ ಮಹತ್ವ ಸಾರುವ ದೃಷ್ಟಿಯಲ್ಲಿ ಬಸ್ ತಂಗುದಾಣ (Bus Stand) ಗಳನ್ನ ಅರಮನೆ ಮಾದರಿಯಲ್ಲಿ ನಿರ್ಮಿಸಲು ತೀರ್ಮಾನಿಸಿದೆ. 10 ಲಕ್ಷ ವೆಚ್ಚದಲ್ಲಿ ಶಾಸಕರ ಅನುದಾನದಡಿಯಲ್ಲಿ ಬಸ್ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ಅರಮನೆ ಮಾದರಿಯಲ್ಲಿ ವಿನ್ಯಾಸ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಈಗಾಗಲೇ ಶೇ.60 ಕಾಮಗಾರಿ ಮುಗಿದಿದೆ.
ಪಾರಂಪರಿಕತೆಯನ್ನ ತೋರಿಸುವ ದೃಷ್ಟಿಯಲ್ಲಿ ಅರಮನೆ ಮಾದರಿಯಲ್ಲಿರುವ ಬಸ್ ನಿಲ್ದಾಣವನ್ನ ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲಾತಾಣಗಳಲ್ಲಿ ಮಸೀದಿ ರೀತಿ ನಿರ್ಮಾಣ ಹಾಗೂ ಗುತ್ತಿಗೆದಾರ ಒಬ್ಬ ಮುಸ್ಲಿಂ ಹೀಗಾಗಿ ಮಸೀದಿ ರೀತಿ ಕಾಮಗಾರಿ ಎಂದು ಹುನ್ನಾರ ನಡೆದಿದೆ. ಈ ಬಗ್ಗೆ ಪೊಲೀಸ್ ಕಮಿಷನರ್ ದೂರು ನೀಡಲಾಗಿದೆ. ಇದನ್ನೂ ಓದಿ: ಬಸ್ ನಿಲ್ದಾಣ ತೆರವು ಮಾಡಲ್ಲ, ಗುಂಬಜ್ ಮಾತ್ರ ತೆರವು ಮಾಡ್ತೇನೆ: ಪ್ರತಾಪ್ ಸಿಂಹ
ಮೈಸೂರಿನಲ್ಲಿ ಈಗಾಗಲೇ ಹಲವಾರು ಸ್ಥಳಗಳಲ್ಲಿ ಇದೇ ಮಾದರಿಯಲ್ಲಿ ತಂಗುದಾಣಗಳಿದೆ. ಅದರ ವಿನ್ಯಾಸದ ಆಧಾರದ ಮೇಲೆ ನಮ್ಮ ಕ್ಷೇತ್ರದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದು ದಂತಿ ಕನ್ಸ್ಟ್ರಕ್ಷನ್ ನ ಮಹದೇವ್ ಎಂಬವರಿಗೆ ಗುತ್ತಿಗೆ ನೀಡಲಾಗಿದೆ. ಬಸ್ ನಿಲ್ದಾಣದೊಳಗೆ ಎಲ್.ಇ.ಡಿ ಸ್ಕ್ರೀನ್ ಅಳವಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಮಾಹಿತಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ. ಮಾಧ್ಯಮಗಳಲ್ಲಿ ಸಂಸದರ ಎಚ್ಚರಿಕೆ ನಂತರ ಕಳಸ ಅಳವಡಿಸಲಾಗಿದೆ ಎಂದು ಬಂದಿದೆ. ವಾಸ್ತವಾಂಶ ಕಳೆದ ವಾರವೇ ಕಳಸ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.