ಬೆಂಗಳೂರು: ಕೆಎಸ್ಆರ್ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ (Transport Employees) ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ಶ್ರೀರಾಮುಲು (B.Sriramulu) ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಬಿ.ಎಸ್.ಅರುಣ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾರಿಗೆ ನಿಗಮದ ಸಿಬ್ಬಂದಿಯ ವೇತನ ಪರಿಷ್ಕರಣೆ ಕಳೆದ ನಾಲ್ಕು ವರ್ಷದಿಂದ ಆಗಿಲ್ಲ. ಆದರೆ ವೇತನ ಪರಿಷ್ಕರಣೆಗೆ ಸರ್ಕಾರ ಬದ್ದವಾಗಿದೆ. ಪರಿಷ್ಕರಣೆ ಸಂಬಂಧ ನಾಲ್ಕು ನಿಗಮಗಳ ಎಂಡಿಗಳ ಜೊತೆ ಸಭೆ ನಡೆಸಿ ಸಮಿತಿ ರಚಿಸಿ ಅವರಿಂದ ವರದಿ ಪಡೆದು ಸರ್ಕಾರಕ್ಕೆ ಕಳಿಸಲಾಗಿದೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ: ದಿನೇಶ್ ಗುಂಡೂರಾವ್
ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗಬೇಕು. ಆದರೆ 2016 ರ ನಂತರ ಪರಿಷ್ಕರಣೆ ಆಗಿಲ್ಲ. 2020-21 ರಲ್ಲಿ ಬಹಳ ಜನ ನೌಕರರು ಮುಷ್ಕರಕ್ಕೆ ಹೋದಾಗ ವೇತನ ಪರಿಷ್ಕರಣೆ ಬೇಡಿಕೆ ಇರಿಸಿ ಬೀದಿಗಿಳಿದು ಹೋರಾಡಿದ್ದರು. ಮಾತುಕತೆ ಮೂಲಕ ಅಂದು ಸಮಸ್ಯೆ ಪರಿಹರಿಸಲಾಗಿತ್ತು ಎಂದು ಹೇಳಿದರು.
ಕಳೆದ ಎರಡು ವರ್ಷದಲ್ಲಿ ನಮಗೆ ಸಾಕಷ್ಟು ತೊಂದರೆಯಾಗಿದೆ. ಕೋವಿಡ್ ನಂತರ ಪ್ರಯಾಣ ದರ ಹೆಚ್ಚಿಸಲಾಗಲಿಲ್ಲ. ಡೀಸೆಲ್ ದರ ಹೆಚ್ಚಾಗಿದೆ. ಪ್ರತಿದಿನ 15 ಕೋಟಿ ಹಣ ಡೀಸೆಲ್ಗೆ ವ್ಯಯವಾಗುತ್ತಿದೆ. ಹಾಗಾಗಿ ಕಷ್ಟದ ಸ್ಥಿತಿ ಇದೆ. ಆದರೂ ಸಿಎಂ ಕೂಡ ವೇತನ ಪರಿಷ್ಕರಣೆ ಚಿಂತನೆ ಮಾಡಿದ್ದಾರೆ. ಆದಷ್ಟು ಶೀಘ್ರದಲ್ಲಿ ವೇತನ ಪರಿಷ್ಕರಣೆ ಸಮಸ್ಯೆ ಇತ್ಯರ್ಥ ಮಾಡಲಿದ್ದೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪಾಕಿಸ್ತಾನ, ಹಿಂದೂಸ್ತಾನ ಒಂದಾಗಬೇಕು: ಕೆ.ಎಸ್.ಈಶ್ವರಪ್ಪ
ನಾಲ್ಕು ನಿಗಮ ಲಾಭಕ್ಕೆ ಬರಲು ಪೂರಕವಾಗಿ ವರದಿ ನೀಡಲು ರಚಿಸಿದ್ದ ಶ್ರೀನಿವಾಸಮೂರ್ತಿ ಸಮಿತಿ ವರದಿ ಈಗಾಗಲೇ ಬಂದಿದೆ. ಎಲ್ಲವನ್ನೂ ನೋಡಿ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನದಲ್ಲಿ ಸಿಎಂ ಜೊತೆ ಚರ್ಚಿಸಿ ವೇತನ ಪರಿಷ್ಕರಣೆ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.