ಬೆಂಗಳೂರು: ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಶಂಕಿತ ಆರೋಪಿಯನ್ನು ಬಂಧಿಸಿದೆ.
ಸಿಂಧಗಿಯ ಹಿಂದೂ ಪರ ಸಂಘಟನೆಯ ಕಾರ್ಯಕರ್ತನಾದ ಪರಶುರಾಮ್ ವಾಗ್ಮೋರೆಯನ್ನು ಬಂಧಿಸಲಾಗಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಸೋಮವಾರ ಮಹಾರಾಷ್ಟ್ರದಲ್ಲಿ ಪರಶುರಾಮ್ ವಾಗ್ಮೋರೆಯನ್ನು ಬಂಧಿಸಿದ್ದು, ಮೂರನೇ ಎಸಿಎಂಎಂ ನ್ಯಾಯಾಲಯ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಾಗ್ಮೋರೆಯನ್ನು ನೀಡಿದೆ. ಈತ 5 ಅಡಿ ಒಂದು ಇಂಚು ಎತ್ತರ ಹೊಂದಿದ್ದು, 75-80 ಕೆಜಿ ತೂಕವನ್ನು ಹೊಂದಿದ್ದಾನೆ.
ಕಳೆದ ವರ್ಷದ ಸೆಪ್ಟಂಬರ್ 5 ರಂದು ನಡೆದ ಗೌರಿ ಹತ್ಯೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳಾದ ನವೀನ್ ಕುಮಾರ್, ಅಮಿತ್, ಪ್ರವೀಣ್ ವಿಚಾರಣೆ ಮಾಡುತ್ತಿರುವ ಎಸ್ಐಟಿ ಪೊಲೀಸರು ಆರೋಪಿಗಳ ಹೇಳಿಕೆಯ ಆಧಾರದ ಮೇಲೆ ಕೆಲ ತಿಂಗಳಿನಿಂದ ಪರುಶುರಾಮ್ ವಾಗ್ಮೋರೆಯ ಚಲನವಲನಗಳ ಮೇಲೆ ನಿಗಾ ವಹಿಸಿದ್ದರು.
ಪರಶುರಾಮ್ ಹೇಳಿಕೆ ಆಧರಿಸಿ ಮಂಗಳೂರಿನಲ್ಲಿ ನಿನ್ನೆ ಮತ್ತೊಬ್ಬನನ್ನು ಬಂಧಿಸಲಾಗಿದೆ. ಶಂಕಿತರನ್ನು ಬಂಧಿಸಿದ್ದರೂ ಪಿಸ್ತೂಲ್ ಯಾರ ಬಳಿ ಇದೆ ಎನ್ನುವುದು ತಿಳಿದು ಬಂದಿಲ್ಲ.
ಸಿಸಿಟಿವಿ ದೃಶ್ಯಾವಳಿ ಆಧಾರದ ಎಸ್ಐಟಿ ನಾಲ್ವರು ಆರೋಪಿಗಳ ರೇಖಾಚಿಕತ್ರವನ್ನು ಬಿಡಿಸಿತ್ತು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದ ವಿಧಿ ವಿಜ್ಞಾನ ಪ್ರಯೋಗಾಲಯ 5.1 ಅಡಿ ಅಥವಾ 5.2 ಅಡಿ ಎತ್ತರ ಹಾಗೂ 70 ಕೆಜಿಯಷ್ಟು ತೂಕ ಇರುವ ವ್ಯಕ್ತಿಯಿಂದ ಶೂಟ್ ಆಗಿದೆ ಎಂದು ಹೇಳಿತ್ತು.