ಶ್ರೀನಗರ: ಭಾನುವಾರ ಎಲ್ಇಟಿಯ ಇಬ್ಬರು ಭಯೋತ್ಪಾದಕರನ್ನು ಗ್ರಾಮಸ್ಥರೇ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಹಿಂದೆಲ್ಲಾ ಜಮ್ಮು ಹಾಗೂ ಕಾಶ್ಮೀರದಲ್ಲಿ ಸೈನಿಕರಷ್ಟೇ ಉಗ್ರರನ್ನು ಬಂಧಿಸಲು ಸಾಧ್ಯವಾಗುತ್ತಿತ್ತು. ಇದೀಗ ರಿಯಾಸಿ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಗ್ರಾಮಸ್ಥರೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮಿಂದ ಉಗ್ರರನ್ನು ಬಂಧಿಸಲು ಹೇಗೆ ಸಾಧ್ಯವಾಯಿತು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಗ್ರಾಮಸ್ಥನೊಬ್ಬ, ನನಗೆ ನನ್ನ ಅಣ್ಣನಿಂದ ಕರೆ ಬಂದಿತ್ತು. ಇಬ್ಬರು ಉಗ್ರರು ತನ್ನನ್ನು ಕೊಲ್ಲಲು ಬರುತ್ತಿರುವುದಾಗಿ ತಿಳಿಸಿದ್ದ. ತಕ್ಷಣ ಆತ ಹೇಳಿದ ಪ್ರದೇಶಕ್ಕೆ ನಾನು ನನ್ನ ಸೋದರ ಸಂಬಂಧಿಗಳೊಂದಿಗೆ ಧಾವಿಸಿದೆ. ಆ ಸಂದರ್ಭ ಅಲ್ಲಿ ಇಬ್ಬರು ಎಲ್ಇಟಿ ಭಯೋತ್ಪಾದಕರು ಮಲಗಿರುವುದು ಕಂಡುಬಂತು. ನಾವೆಲ್ಲಾ ಸೇರಿ ಅವರಿಬ್ಬರನ್ನು ಸೆರೆ ಹಿಡಿಯಲು ಬೆಳಗ್ಗೆಯವರೆಗೂ ಕಾದು ಕುಳಿತಿದ್ದೆವು ಎಂದು ವಿವರಿಸಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಬದಲಾಗುತ್ತಿದೆ ವಾತಾವರಣ- ಉಗ್ರರನ್ನು ಸದೆಬಡೆದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ಅವರು ಮಲಗಿದ್ದ ವೇಳೆ ಅವರ ಶಸ್ತ್ರಾಸ್ತ್ರಗಳಿದ್ದ ಬ್ಯಾಗ್ ಅನ್ನು ನಾವು ಹೊರತೆಗೆದೆವು. ಈ ವೇಳೆ ಅವರಲ್ಲಿ ಒಬ್ಬ ಎಚ್ಚರಗೊಂಡು ಓಡಿ ಹೋಗಲು ಪ್ರಯತ್ನಿಸಿದ್ದ. ಆದರೆ ನಾವು ಅವನನ್ನು ಹಿಡಿದು, ಹಗ್ಗಗಳಿಂದ ಕಟ್ಟಿ ಹಾಕಿದೆವು. ತಕ್ಷಣವೇ ಪೊಲೀಸರಿಗೆ ಕರೆ ಮಾಡಿದೆವು. ಕೆಲವೇ ಹೊತ್ತಿನಲ್ಲಿ ಪೊಲೀಸರು ಸ್ಥಳಕ್ಕೆ ಬಂದು, ಉಗ್ರರನ್ನು ಅವರ ಕೈಗೆ ಒಪ್ಪಿಸಿದೆವು ಎಂದು ತಿಳಿಸಿದರು.
ಹಿಂದೆಲ್ಲಾ ಜಮ್ಮು ಮತ್ತು ಕಾಶ್ಮೀರದಲ್ಲಿ ಜನರು ಬದುಕಲು ಹೆದರುವಂತಹ ಪರಿಸ್ಥಿತಿ ಇತ್ತು. ಇದೀಗ ಅದಕ್ಕೆಲ್ಲಾ ವ್ಯತಿರಿಕ್ತ ಎನ್ನುವಂತೆ ರಿಯಾಸಿ ಜಿಲ್ಲೆಯಲ್ಲಿ ನಡೆದ ಐಇಡಿ ಸ್ಫೋಟದ ರೂವಾರಿ ಲಷ್ಕರ್ ಕಮಾಂಡರ್ ತಾಲಿಬ್ ಹುಸೇನ್ನನ್ನು ಗ್ರಾಮಸ್ಥರೇ ಸದೆಬಡೆದು ನಂತರ ಟುಕ್ಸಾನ್ನಲ್ಲಿ ಭದ್ರತಾ ಪಡೆಗಳಿಗೆ ಒಪ್ಪಿಸಿದ್ದಾರೆ. ಈತನ ಜೊತೆಗೆ ಮತ್ತೊಬ್ಬ ಉಗ್ರ ಫೈಝುಲ್ ಅಹಮದ್ ದಾರ್ನನ್ನು ಗ್ರಾಮಸ್ಥರು ಬಂಧಿಸಿದ್ದಾರೆ. ಇದನ್ನೂ ಓದಿ: ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡ್ತಿದ್ದ ಸಲಿಂಗಕಾಮಿ ಸ್ನೇಹಿತನನ್ನು ಕೊಂದು ಚೀಲದಲ್ಲಿ ಸುತ್ತಿ ಎಸೆದ ಸ್ನೇಹಿತರು
ಉಗ್ರರ ಬಳಿ ಇದ್ದ 2 ಎಕೆ-47 ರೈಫಲ್ಗಳು, 7 ಗ್ರೆನೇಡ್ಗಳು, ಹಾಗೂ ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೀಗ ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಗ್ರಾಮಸ್ಥರ ಧೈರ್ಯ, ಸಾಹಸವನ್ನು ಶ್ಲಾಘಿಸಿ, 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.