– ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ರಾಜೀನಾಮೆ
ಹಾವೇರಿ: ಇಲ್ಲಿನ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ (Chilli Market) ಪ್ರತಿಭಟನೆ ನಡೆದ ಬೆನ್ನಲ್ಲೇ ಮಂಗಳವಾರ ಮಹತ್ವದ ಸಭೆ ನಡೆಸಲಾಗಿದೆ. ಹಾವೇರಿ APMC ಸಿದ್ದೇಶ್ವರ ಕಲ್ಯಾಣಮಂಟಪದಲ್ಲಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ, ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್, ಜಿಲ್ಲಾಧಿಕಾರಿ ರಘುನಂದಮೂರ್ತಿ ಹಾಗೂ ಎಸ್ಪಿ ಅಂಶುಕುಮಾರ್ ನೇತೃತ್ವದದಲ್ಲಿ ಸಭೆ ನಡೆಸಲಾಗಿದೆ.
ಸಭೆಯಲ್ಲಿ ದಿಢೀರ್ ಬೆಲೆ ಕುಸಿತಕ್ಕೆ ಕಾರಣ ಏನು ಎಂಬುದನ್ನ ಚರ್ಚಿಸಿದ್ದು, ರೈತರಿಗೆ ಅನುಕೂಲವಾಗುವಂತೆ ಹಲವು ನಿರ್ಣಯ ಕೈಗೊಳ್ಳಲಾಗಿದೆ. ಈ ನಡುವೆ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಭೆಯ ನಿರ್ಣಯಗಳೇನು?
1. ಮೆಣಸಿನ ಕಾಯಿ ಮರು ಟೆಂಡರ್ ಮಾಡುವುದಕ್ಕೆ ಒಪ್ಪಿಗೆ.
2. ವಾರದಲ್ಲಿ ಎರಡು ಬಾರಿ ಮಾರ್ಕೆಟ್ ಮಾಡಬೇಕು
3. ಸರ್ಕಾರಿ ಆಸ್ತಿಪಾಸ್ತಿ ಹಾನಿಗಳ ಬಗ್ಗೆ ತನಿಖೆ.
4. ಮಾರುಕಟ್ಟೆಯಲ್ಲಿ ಪೊಲೀಸ್ ಠಾಣೆ ಸ್ಥಾಪನೆ ಮಾಡುವ ಬಗ್ಗೆ ಚರ್ಚಿಸಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಾತಮಾಡಿದ್ದ ಅಧ್ಯಕ್ಷ ಸುರೇಶಗೌಡ ಪಾಟೀಲ್, ನನ್ನ ಅವಧಿಯಲ್ಲಿ ಗಲಾಟೆ ಆಗಬಾರದಿತ್ತು ಆಗಿದೆ, ಇದರಿಂದ ನೋವಾಗಿದೆ. 2,000 ಕೋಟಿ ರೂ. ವಹಿವಾಟು ನಡೆಯೋ ಮಾರ್ಕೇಟ್ ಇದು. 40 ವರ್ಷದ ಅಧಿಕಾರ ಮಾಡಿದ್ದೇನೆ. ಕಳೆದ ವಾರ 4 ಲಕ್ಷ ಚೀಲ ಮೆಣಸಿನಕಾಯಿ ಬಂದಿತ್ತು. ವಾರಕ್ಕೆ ಎರಡು ಮಾರ್ಕೆಟ್ ನಡೆಯುತ್ತೆ. ಆದ್ರೆ ನಾವು ಒಂದೇ ಮಾರ್ಕೆಟ್ ಮಾಡಿದ್ವಿ, ನಿನ್ನೆ ಬಂದ ಸ್ಟಾಕ್ನಲ್ಲಿ ಒಳ್ಳೇ ಕ್ವಾಲಿಟಿ ಇರಲಿಲ್ಲ. ಕೆಲವೊಂದಕ್ಕೆ ಬೇಡಿಕೆ ಕಡಿಮೆ ಆಗಿದೆ. ಟೆಂಡರ್ ಇಡಬಹುದಿತ್ತು, ಕಳೆದ ವಾರ ಇದ್ದಂತಹ ಮಾಲ್ ಹಾಗೇ ಇದೆ. ಎಲ್ಲಾ ಕೋಲ್ಡ್ ಸ್ಟೋರೆಜ್ ಭರ್ತಿ ಆಗಿದೆ. ರೇಟ್ ಸಿಗಬಹುದು ಅಂತ ವೇಟ್ ಮಾಡ್ತಾರೆ. ಆದ್ರೆ ತದನ್ನ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಯಾರೋ ರೈತರಿಗೆ ಕುಮ್ಮಕ್ಕು ನೀಡಿದ್ದಾರೆ. ಎಪಿಎಂಸಿ ಯಾರ್ಡ್ ವಾಹನಗಳಿಗೆ ಬೆಂಕಿ ಹಚ್ಚಿದಾರೆ. ಜೀವ ಉಳಿಸೋ ಅಧಿಕಾರಿಗಳನ್ನೇ ಹೊಡೆದಿದಾರೆ. 40 ವರ್ಷಗಳ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಸಮಾಧಾನವಾಗಿ ಮಾತನಾಡಬೇಕಿತ್ತು. ಅದೋನಿ, ಮಂತ್ರಾಲಯ, ಬಳ್ಳಾರಿ, ಆಂಧ್ರಪ್ರದೇಶಗಳಿಂದ ಇಲ್ಲಿಗೆ ವ್ಯಾಪಾರಕ್ಕೆ ಬರ್ತಾರೆ ಎಂದು ತಿಳಿಸಿದ್ದಾರೆ.
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಮಾತನಾಡಿ, ನಮ್ಮ ಮಾರ್ಕೆಟ್ನಲ್ಲಿ ಈ ರೀತಿ ಆಗಿದ್ದು ಒಂದು ಕಪ್ಪು ಚುಕ್ಕೆ. ಇಂಥ ಮಾರ್ಕೆಟ್ ಎಲ್ಲಿಯೂ ಇಲ್ಲ. ಮೆಣಸಿಕಾಯಿಗೆ ಉತ್ತಮ ತೂಕ, ಬೆಲೆ ಕೊಡೋ ಮಾರ್ಕೇಟ್ ಇದು. 5 ಲಕ್ಷಗಳಷ್ಟು ಚೀಲಗಳು ಬರುತ್ತೆ. ಈಗ ಬರೋ ಮೆಣಸಿನಕಾಯಿ ಕ್ವಾಲಿಟಿ ಕಡಿಮೆ ಇದ್ದ ಕಾರಣ ಬೆಲೆ ಕಡಿಮೆಯಾಗಿದೆ. ನಮ್ಮ ರೈತರು ದುಸ್ಸಾಹಸಕ್ಕೆ ಇಳಿದಿಲ್ಲ, ಯಾರು ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ ಗೊತ್ತಿಲ್ಲ. ತನಿಖೆಯಿಂದ ಸತ್ಯ ಹೊರಬರಲಿದೆ. ತಪ್ಪೆಸಗಿದವರಿಗೆ ಶಿಕ್ಷೆ ಆಗಲಿದೆ ಎಂದು ಎಚ್ಚರಿಸಿದ್ದಾರೆ.