ದಾವಣಗೆರೆ: ದೇವರ ಕೋಣಕ್ಕಾಗಿ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳ ಎರಡು ಊರುಗಳ ನಡುವೆ ಕಿತ್ತಾಟ ನಡೆದಿದೆ.
7 ವರ್ಷದ ಹಿಂದೆ ಮಾರಿಕಾಂಬಾ ದೇವಿಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮಸ್ಥರು ಕೋಣವನ್ನು ಬಿಟ್ಟಿದ್ದರು. ಗ್ರಾಮದಲ್ಲೇ ಓಡಾಡಿಕೊಂಡಿದ್ದ ಕೋಣ ಚೆನ್ನಾಗಿ ಬೆಳೆದಿತ್ತು. ಆದರೆ ಕಳೆದ ಮೂರು ದಿನಗಳ ಹಿಂದೆ ಗ್ರಾಮದಲ್ಲಿದ್ದ ಕೋಣ ಏಕಾಏಕಿ ಕಾಣೆಯಾಗಿತ್ತು. ಕೋಣ ಕಾಣೆಯಾದ ಕಾರಣ ಗ್ರಾಮಸ್ಥರು ಹುಡುಕಾಟ ನಡೆಸಿದ್ದರು.
ದಾವಣಗೆರೆಯ ಬೇಲಿ ಮಲ್ಲೂರು ಗ್ರಾಮದಲ್ಲಿ ನಾಪತ್ತೆಯಾಗಿದ್ದ ಕೋಣ ಮೂರು ದಿನಗಳ ಬಳಿಕ ಶಿವಮೊಗ್ಗ ಜಿಲ್ಲೆಯ ಹಾರ್ನಳ್ಳಿಯಲ್ಲಿ ಪತ್ತೆ ಆಗಿದೆ. ಕೋಣವನ್ನು ಕಂಡ ಮಲ್ಲೂರು ಗ್ರಾಮಸ್ಥರು ಈ ಕೋಣ ತಮ್ಮ ದೇವರಿಗೆ ಸೇರಿದ್ದು ಎಂದು ಹೇಳಿದ್ದಾರೆ. ಆದರೆ ಈ ನಡುವೆ ಕೋಣ ನಮ್ಮದು ಎಂದು ಎರಡೂ ಗ್ರಾಮಸ್ಥರ ನಡುವೆ ಗಲಾಟೆಯಾಗಿದೆ. ಸದ್ಯ ಈ ಪ್ರಕರಣ ಹೊನ್ನಾಳಿ ಠಾಣೆ ಮೆಟ್ಟಿಲೇರಿದೆ.