ರಾಮನಗರ: ಕೆರೆಯಲ್ಲಿ ಈಜಲು ಹೋಗಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಅವ್ವೇರಹಳ್ಳಿಯ ಬಳಿ ನಡೆದಿದೆ.
ಬೆಂಗಳೂರಿನ ವೈಟ್ ಫಿಲ್ಡ್ ಸಮೀಪದ ಬೋಜನ ಹೊಸಹಳ್ಳಿಯ ಚೇತನ್(24) ಮೃತ ವಿದ್ಯಾರ್ಥಿ. ಶನಿವಾರ ಪ್ರವಾಸಿ ಹಾಗೂ ಪುರಾಣ ಪ್ರಸಿದ್ಧ ರೇವಣಸಿದ್ದೇಶ್ವರ ಬೆಟ್ಟಕ್ಕೆ ಕಾಲೇಜು ವಿದ್ಯಾರ್ಥಿಗಳು ಬಂದಿದ್ದರು.
ಮಧ್ಯಾಹ್ನದ ನಂತರ ಬೆಟ್ಟದ ತಪ್ಪಲಿನಲ್ಲಿರುವ ಹೊಸಕೆರೆಯಲ್ಲಿ ಈಜಲು 8 ಜನ ಸ್ನೇಹಿತರು ಹೋಗಿದ್ದಾರೆ. ಆದರೆ ಕೆರೆಯಲ್ಲಿ ಇಳಿದ ಚೇತನ್ ಮುಳುಗಿ ಸಾವನ್ನಪ್ಪಿದ್ದಾನೆ. ನಂತರ ಚೇತನ್ ನ ಶವಕ್ಕಾಗಿ ಸ್ನೇಹಿತರೇ ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಸಾಯಂಕಾಲದ ವೇಳೆಗೆ ಆರಂಭವಾದ ಮಳೆಯಿಂದ ಕೆರೆಯ ಬಳಿ ಕಾಲ ಕಳೆಯುವಂತಾಗಿತ್ತು.
ಸ್ನೇಹಿತರು ರಾತ್ರಿ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇಂದು ಬೆಳಗ್ಗೆಯೇ ಶವಕ್ಕಾಗಿ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿಗಳಿಂದ ಹುಟುಕಾಟ ನಡೆಸುತ್ತಿದ್ದಾರೆ.