ಹಾಸನ: ಒಂದೆಡೆ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇತ್ತ ಹಾಸನದಲ್ಲಿ ಗಜರಾಜನ ಗ್ರಾಮ ಪ್ರದಕ್ಷಿಣೆ ನೋಡಿ ಗ್ರಾಮಸ್ಥರು ದಂಗಾಗಿದ್ದಾರೆ.
ಹೌದು. ಆಲೂರು ತಾಲೂಕಿನ ಚಿನ್ನಳ್ಳಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ರಸ್ತೆಗಳಲ್ಲಿ ಗಂಭೀರ ಹೆಜ್ಜೆ ಹಾಕಿ ಜನರನ್ನು ಆತಂಕಕ್ಕೀಡು ಮಾಡಿದೆ. ಗ್ರಾಮದ ಒಂದು ತುದಿಯಿಂದ ಪ್ರವೇಶಿಸಿದ ಕಾಡಾನೆ, ಊರ ತುಂಬೆಲ್ಲಾ ಸುತ್ತು ಹಾಕಿ ಕಾಫಿ ತೋಟಕ್ಕೆ ಪ್ರವೇಶಿಸಿದೆ. ಗ್ರಾಮದಲ್ಲಿ ಪ್ರತ್ಯೇಕ್ಷವಾದ ಆನೆ ಕಂಡು ಜನರು ಭಯಗೊಂಡಿದ್ದು, ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಅಲ್ಲದೆ ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದಾರೆ.
ಗ್ರಾಮದಲ್ಲಿ ರಾಜಾರೋಷವಾಗಿ ಆನೆ ಓಡಾಡುತ್ತಿದ್ದ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಆನೆ ಆರಾಮಾಗಿ ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯಗಳು, ಜನರು ಗ್ರಾಮಕ್ಕೆ ಎಂಟ್ರಿ ಕೊಟ್ಟ ಗಜರಾಜನನ್ನು ನೋಡಿ ಗಾಬರಿಗೊಂಡು ಓಡುತ್ತಿರುವ ದೃಶ್ಯಗಳು ಸೆರೆಯಾಗಿದೆ.