ಹಾಸನ: ಗ್ರಾಮ ಪಂಚಾಯಿತಿ (Gram Panchayat) ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಯಲ್ಲಿ ಸದಸ್ಯರು ಭಾಗವಹಿಸಲಿಲ್ಲ ಎಂದು ಅಧ್ಯಕ್ಷೆ (President) ಸ್ಥಾನದ ಆಕಾಂಕ್ಷಿ ಕಣ್ಣೀರಿಟ್ಟಿರುವ ಘಟನೆ ಸಕಲೇಶಪುರ (Sakleshpura) ತಾಲೂಕಿನ ಹೊಂಗಡಹಳ್ಳ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ವನಜಾಕ್ಷಿ ಕಣ್ಣೀರಿಟ್ಟ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿ. ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಬಿಸಿಎಂಗೆ ಮೀಸಲಾಗಿತ್ತು. ಗ್ರಾಮ ಪಂಚಾಯಿತಿಯಲ್ಲಿ ವನಜಾಕ್ಷಿ ಏಕೈಕ ಎಸ್ಸಿ ಮಹಿಳಾ ಸದಸ್ಯರಾಗಿದ್ದಾರೆ. ಈ ಮೊದಲು ಜೆಡಿಎಸ್ ಬೆಂಬಲ ಪಡೆದಿದ್ದ ವನಜಾಕ್ಷಿ ಅವರು, ಇತ್ತೀಚೆಗೆ ಕಾಂಗ್ರೆಸ್ ಮುಖಂಡರೊಂದಿಗೆ ಕಾಣಿಸಿಕೊಂಡ ಕಾರಣಕ್ಕೆ ಇತರೆ ಯಾವ ಸದಸ್ಯರು ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. ಇದನ್ನೂ ಓದಿ: ಕೆರಗೋಡು ಬಂದ್ಗೆ ಉತ್ತಮ ಪ್ರತಿಕ್ರಿಯೆ – ಶಾಸಕ ಗಣಿಗ ರವಿ ಮನೆಗೆ ಭದ್ರತೆ ಹೆಚ್ಚಳ
ಈ ಬೆಳವಣಿಗೆಯಿಂದ ಮನನೊಂದ ವನಜಾಕ್ಷಿ ಪಂಚಾಯಿತಿ ಆವರಣದಲ್ಲಿ ಕಣ್ಣೀರಿಟ್ಟು ಮಾತನಾಡಿ, ನಾನು ದಲಿತ ಮಹಿಳೆ ಎಂಬ ಕಾರಣಕ್ಕೆ ಇತರೆ ಸದಸ್ಯರು ಅಧ್ಯಕ್ಷರ ಆಯ್ಕೆಗೆ ಮತ ಚಲಾಯಿಸಲು ಬಾರದೆ ಕೋರಂ ಕೊರತೆಯಾಗುವಂತೆ ಮಾಡಿದ್ದಾರೆ. ದಲಿತ ಮಹಿಳೆ ಅಧ್ಯಕ್ಷ ಸ್ಥಾನ ಅಲಂಕರಿಸುವುದನ್ನು ನೋಡಲಾಗದ ಮನಸ್ಥಿತಿಯನ್ನು ಸದಸ್ಯರು ಹೊಂದಿದ್ದಾರೆ. ಈ ಹಿಂದೆ ಬೇರೆ ಸದಸ್ಯರು ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗುವಾಗ ನಾನು ಹಾಜರಿದ್ದು ಮತ ಚಲಾವಣೆ ಮಾಡಿದ್ದೇನೆ. ಇಂದು ಅವರು ನಡೆದುಕೊಂಡ ರೀತಿ ಮನಸ್ಸಿಗೆ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಜಿ.ಎಂ ಸಿದ್ದೇಶ್ವರ್ ವಿರುದ್ಧ ರೆಬಲ್ ಆದ ಮಾಜಿ ಸಚಿವ ರೇಣುಕಾಚಾರ್ಯ!
ಚುನಾವಣಾ ಅಧಿಕಾರಿ ಆದಿತ್ಯ ಪ್ರತಿಕ್ರಿಯಿಸಿ, ಚುನಾವಣೆಗೆ ವನಜಾಕ್ಷಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಆರು ಜನ ಸದಸ್ಯರಲ್ಲಿ ಕೋರಂಗಾಗಿ ಮೂವರು ಸದಸ್ಯರ ಅಗತ್ಯವಿತ್ತು. ಇಬ್ಬರು ಮಾತ್ರ ಹಾಜರಿದ್ದ ಕಾರಣ ಅರ್ಧ ಗಂಟೆಗಳ ಕಾಲ ಹೆಚ್ಚುವರಿ ಸಮಯ ನೀಡಲಾಗಿತ್ತು. ಆದರು ಉಳಿದ ಸದಸ್ಯರು ಬಾರದೇ ಇರುವ ಕಾರಣ ಚುನಾವಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹದಿಹರೆಯದವರ ಮದ್ಯ ನಶೆಗೆ ಅಡ್ಡಾದಿಡ್ಡಿ ಓಡಿದ ಕಾರ್ – ಎಂಟು ಬೈಕ್ಗಳು ಜಖಂ