ಚಿಕ್ಕಬಳ್ಳಾಪುರ: ಅದು ಒಂದಲ್ಲ ಎರಡಲ್ಲ 8 ವರ್ಷಗಳಿಂದಲೂ ಬರಪೀಡಿತ ಜಿಲ್ಲೆಯಾದರೂ, ಅವಳಿ ನಗರಗಳ ಜನತೆಗೆ ಎಂದು ಕುಡಿಯುವ ನೀರು ಎಂದೂ ಕೊರತೆಯಾಗಿರಲಿಲ್ಲ. ಬೆಂಗಳೂರು ಮಹಾನಗರಕ್ಕೆ ಕಾವೇರಿ ಆಸರೆಯಾದಂತೆ, ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಎರಡು ನಗರಗಳಿಗೆ ಜಕ್ಕಲಮಡುಗು ಜಲಾಶಯವೇ ಆಸರೆ ಆಗಿತ್ತು. ಆದರೆ ಈ ಬಾರಿ ಮಳೆಗಾಲದಲ್ಲೇ ಜಲಾಶಯ ಬತ್ತಿ ಬರಡಾಗಿದ್ದು ಲಕ್ಷಾಂತರ ಮಂದಿಗೆ ಈಗ ಎಲ್ಲಿಲ್ಲದ ಆತಂಕ ಶುರುವಾಗಿದೆ.
ವಿಶ್ವವಿಖ್ಯಾತ ಸರ್ ಎಂ. ವಿಶ್ವೇಶರಯ್ಯನವರು ನಿರ್ಮಾಣದ ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡುಗು ಜಲಾಶಯ ಕೇವಲ ಒಂದು ಜಲಾಶಯ ಅಲ್ಲ. ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ನಗರಗಳ ಜನರ ಪಾಲಿನ ಕಾವೇರಿ ನದಿಯಂತೆ. ಆದರೆ ಎರಡು ವರ್ಷ ಕಳೆಯೋದರೋಳಗೆ ಅವಳಿ ನಗರಗಳ ಜನರ ಜೀವದಾತೆ ಜಕ್ಕಲಮಡುಗು ಜಲಾಶಯದ ಚಿತ್ರಣವೇ ಬದಲಾಗಿ ಹೋಗಿದೆ. ಕಳೆದ 20 ತಿಂಗಳಲ್ಲಿ ತನ್ನ ಒಡಲಲ್ಲಿ ತುಂಬಿಕೊಂಡಿದ್ದ ನೀರನ್ನು ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ನಗರದ ಜನತೆಗೆ ಧಾರೆಯೆರೆದ ಜಕ್ಕಲಮಡುಗು ಜಲಾಶಯ ಈಗ ಬರಿದಾಗಿ ಹೋಗಿದೆ. ಜಲಾಶಯವೆಲ್ಲವೂ ಖಾಲಿ ಖಾಲಿಯಾಗಿ ಆಸ್ಥಿಪಂಜರದಂತೆ ಭಾವಾಗುತ್ತಿದ್ದು, ಇಷ್ಟು ದಿನ ಜಕ್ಕಲಮಡುಗು ಜಲಾಶಯದ ನೀರು ಕುಡಿಯುತ್ತಿದ್ದ ಅವಳಿ ನಗರಗಳ ಜನತೆಗೆ ಕುಡಿಯೋ ನೀರಿಗೆ ಮುಂದೆ ಏನು ಮಾಡೋದು ಎನ್ನುವ ಆತಂಕ ಶುರುವಾಗಿದೆ.
ಬರದ ನಡುವೆಯೂ ಪ್ರತಿ ವರ್ಷವೂ ನಂದಿಗಿರಿ, ಸ್ಕಂದಗಿರಿ, ಚನ್ನಗಿರಿ ಬೆಟ್ಟ ಸಾಲುಗಳ ನಡುವೆ ಬೀಳುತ್ತಿದ್ದ ಮಳೆಯಿಂದ ಅಷ್ಟೋ ಇಷ್ಟೋ ತುಂಬಿ ತುಳುಕುತ್ತಿದ್ದ ಈ ಜಲಾಶಯ ಈ ಬಾರಿ ಮಳೆ ಕೊರತೆಯಿಂದ ಸಂಪೂರ್ಣ ಖಾಲಿ ಖಾಲಿಯಾಗಿದೆ. 2012ರಲ್ಲಿ ಪುನರ್ನಿರ್ಮಾಣಗೊಂಡು ಮೇಲ್ದರ್ಜೆಗೇರಿದ ಮೇಲೆ ಸತತ ಆರು ವರ್ಷಗಳಿಂದಲೂ ಬರಿದಾಗಿರಲಿಲ್ಲ. ಸದಾ ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರದ ಎರಡೂವರೆ ಲಕ್ಷ ಮಂದಿಗೆ ಜೀವ ಜಲ ನೀಡುತ್ತಿದ್ದ ಈ ಜಲಾಶಯ ಈಗ ಬರಿದಾಗಿರೋದು ಸ್ವತಃ ಜಿಲ್ಲಾಡಳಿತಕ್ಕೂ ದೊಡ್ಡ ಆತಂಕ ತಂದಿದೆ. ಹೀಗಾಗಿ ಸ್ವತಃ ಡಿಸಿ ಅನಿರುದ್ಧ್ ಶ್ರವಣ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದೆ ಏನು ಮಾಡಬೇಕು ಎಂದು ದಿಕ್ಕು ತೋಚದಂತಾಗಿದ್ದಾರೆ.
ಇಷ್ಟು ದಿನ ಜಕ್ಕಲುಮಡುಗು ಜಲಾಶಯದ ನೀರು ಕುಡಿಯುತ್ತಿದ್ದ ಅವಳಿ ನಗರಗಳ ಜನರಿಗೆ ಈಗ ಕೊಳವೆ ಬಾವಿಗಳ ನೀರಷ್ಟೇ ಆಧಾರವಾಗಿದೆ.