ಉಡುಪಿ: ಒಂದು ಲೆಕ್ಕದಲ್ಲಿ ನಾಯಿಗಳು ರಾಜಕಾರಣಿಗಳಂತೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಡಾಗ್ ಶೋ ಉದ್ಘಾಟಿಸಿ ಈ ರೀತಿ ಮಾತನಾಡಿದ ಅವರು, ಬೀದಿ ನಾಯಿಗಳ ಜಾಸ್ತಿಯಾಗುತ್ತಿರುವಂತಹ ಸಂದರ್ಭದಲ್ಲಿ ಒಂದು ಕಡೆ ನಾಯಿಯನ್ನು ಪ್ರೀತಿಸುವ ವರ್ಗವಿದ್ದರೆ, ಇನ್ನೊಂದೆಡೆ ದ್ವೇಷಿಸುವ ವರ್ಗವೂ ಇದೆ. ನಾಯಿಗಳು ಒಂದು ರೀತಿಯಲ್ಲಿ ರಾಜಕಾರಣಿಗಳಿದ್ದಂತೆ. ನಮ್ಮನ್ನು ಪ್ರೀತಿಸುವವರೂ ಇದ್ದಾರೆ. ದ್ವೇಷಿಸುವ ಮಂದಿಯೂ ಇದ್ದಾರೆ ಅಂತ ಅವರು ತಿಳಿಸಿದ್ದಾರೆ.
ಪ್ರೀತಿ, ದ್ವೇಷ ಇವರೆಡನ್ನೂ ಎಲ್ಲೊ ಒಂದು ಕಡೆ ಬ್ಯಾಲೆನ್ಸ್ ಮಾಡಬೇಕಾಗಿದೆ. ಕೆಲವು ಕಡೆ ನಮಗೆ ಜನ ಬೈತಾರೆ. ಬೀದಿ ನಾಯಿಗಳಿವೆ, ಶಾಸಕರು, ಮುನ್ಸಿಪಾಲಿಟಿಯವರು ಏನ್ ಮಾಡ್ತಾ ಇದ್ದೀರಿ?. ಒಂದು ವೇಳೆ ನಾವೇನಾದ್ರೂ ಬೀದಿನಾಯಿಗಳನ್ನು ಮುಟ್ಟಲು ಹೋದ್ರೆ ಅಲ್ಲಿ ಮನೇಕಾ ಗಾಂಧಿಯವರಿಗೆ ಕೋಪ ಬರುತ್ತದೆ. ಹೀಗಾಗಿ ನಮಗೇನು ಮಾಡಲು ಸಾಧ್ಯವಿಲ್ಲ ಅಂತ ಅವರು ಹೇಳಿದ್ರು.
ಒಂದು ಕಡೆ ಮನೇಕಾ ಗಾಂಧಿ, ಇನ್ನೊಂದೆಡೆ ಪೇಟಾ(ಪ್ರಾಣಿ ದಯಾ ಸಂಘ). ಪೇಟಾದವರು ಮನೇಕಾ ಗಾಂಧಿಗಿಂತ ಗಟ್ಟಿಯಿದ್ದಾರೆ. ಈ ಮಧ್ಯೆ ಜನರ ದೂರುಗಳು. ಇವೆಲ್ಲದರ ಮಧ್ಯೆ ಹೇಗೆ ಬದುಕಬೇಕೆಂದು ನನಗೆ ಪತ್ರಕರ್ತರೇ ಮಾರ್ಗದರ್ಶನ ಮಾಡಬೇಕೆಂದು ಹೇಳಿದ್ರು.
ಮನೇಕಾ ಗಾಂಧಿ ಅವರು ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿಯಾಗಿದ್ದು ಪರಿಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದರು.