ಹಾವೇರಿ: ಮದುವೆ (Marriage) ಸಮಾರಂಭ ಎಂದರೆ ಅಲ್ಲಿ ಅದ್ದೂರಿ ಇದ್ದೇ ಇರುತ್ತದೆ. ಇಲ್ಲಿ ಮದುವೆ ಆಮಂತ್ರಣ ಪತ್ರಿಕೆಯ (Invitation Card) ಜೊತೆಗೆ ಭಗವದ್ಗೀತೆ (Bhagavad Gita) ಪುಸ್ತಕವನ್ನು ನೀಡಿ ಮದುವೆಗೆ ಆಹ್ವಾನಿಸಲಾಗುತ್ತಿದೆ. ಸುಮಾರು 75 ಸಾವಿರಕ್ಕೂ ಅಧಿಕ ಮದುವೆ ಆಮಂತ್ರಣ ಪತ್ರಿಕೆಯ ಜೊತೆಗೆ ಭಗವದ್ಗೀತೆ ಪುಸ್ತಕ ನೀಡಿ ಮದುವೆಗೆ ಆಹ್ವಾನಿಸಲಾಗಿದೆ. ಮಾತ್ರವಲ್ಲದೇ 132 ಜೋಡಿಗಳ ಉಚಿತವಾಗಿ ಮದುವೆ (Mass Wedding) ಮಾಡಲಾಗುತ್ತಿದೆ.
ಇದು ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ವಂದೇಮಾತರಂ ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷರ ಪ್ರಕಾಶ ಬುರಡಿಕಟ್ಟಿ ಅವರ ವಿಭಿನ್ನ ಮದುವೆ ಕಾರ್ಯಕ್ರಮ. ನಾಳೆ ಪ್ರಕಾಶ ಬುರಡಿಕಟ್ಟಿಯ ಮದುವೆಯ ಜೊತೆಗೆ ರಾಣೇಬೆನ್ನೂರು ತಾಲೂಕಿನ 132 ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಪ್ರತಿಯೊಂದು ಜೋಡಿಗೆ ವಂದೇಮಾತರಂ ಸ್ವಯಂಸೇವಾ ಸಂಸ್ಥೆಯ ವತಿಯಿಂದ ಮಾಂಗಲ್ಯ, ಇಬ್ಬರಿಗೂ ಬಟ್ಟೆ ಜೊತೆಗೆ 35 ಸಾವಿರ ರೂ. ಧನಸಹಾಯವನ್ನು ನೀಡಲಾಗುತ್ತಿದೆ. ಅಲ್ಲದೆ ತಾಲೂಕಿನ ಪ್ರತಿಯೊಂದು ಹಳ್ಳಿಯ ಮನೆಮನೆಗೆ ಮದುವೆಯ ಆಮಂತ್ರಣ ಪತ್ರಿಕೆಯ ಜೊತೆಗೆ ಭಗವದ್ಗೀತೆ ಪುಸ್ತಕ ನೀಡುವ ಮೂಲಕ ವಿಭಿನ್ನವಾಗಿ ಮದುವೆ ಕಾರ್ಯಕ್ರಮ ಮಾಡಲಾಗುತ್ತಿದೆ.
ಪ್ರಕಾಶ ಬುರಡಿಕಟ್ಟಿ ಅವರು ತಮ್ಮ ಸಂಬಂಧಿಕರಿಗೆ ನೀಡುವಂತೆ ರಾಣೇಬೆನ್ನೂರಿನ ಕೂಲಿಕಾರ್ಮಿಕರಿಗೆ, ಆಟೋಚಾಲಕರು, ಹಮಾಲರು, ಭಿಕ್ಷುಕರಿಗೆ, ಕುಶಲಕರ್ಮಿಗಳಿಗೆ, ಅಂಧ ಮಕ್ಕಳಿಗೆ ಸೇರಿದಂತೆ ವೃದ್ಧಾಶ್ರಮಗಳಿಗೆ ವಿಶೇಷ ಉಡುಗೊರೆ ಹಾಗೂ ಬಟ್ಟೆಯನ್ನು ನೀಡಲಾಗಿದೆ. ರಾಣೇಬೆನ್ನೂರು ತಾಲೂಕಿನ 132 ಬಡ ಜೋಡಿಗಳು ಹಸೆಮಣೆ ಏರಲಿದ್ದಾರೆ. ಅಲ್ಲದೆ ರಾಣೇಬೆನ್ನೂರು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಮನೆಮನೆಗೆ ಮದುವೆ ಆಮಂತ್ರಣ ಪತ್ರಿಕೆಯ ಜೊತೆಗೆ ಭಗವದ್ಗೀತೆ ಪುಸ್ತಕವನ್ನು ತಲುಪಿಸಿದ್ದಾರೆ.
ಹಿಂದೂ ಧರ್ಮದ ಜಾಗೃತಿ ಹಾಗೂ ಭಗವದ್ಗೀತೆ ಪುಸ್ತಕ ಎಲ್ಲರ ಮನೆಯಲ್ಲಿ ಇರಬೇಕು. ಮಕ್ಕಳು ಅದನ್ನು ಓದುವ ಕೆಲಸ ಆಗಬೇಕು. ಇದೊಂದು ಐತಿಹಾಸಿಕ ಮದುವೆ ಕಾರ್ಯಕ್ರಮವಾಗಿದೆ. ಭಗವದ್ಗೀತೆ ಪುಸ್ತಕ ನೀಡುವುದರ ಮೂಲಕ ಜನರಿಗೆ ಹಿಂದುತ್ವದ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯರು ಈ ಮದುವೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಗೌಪ್ಯತೆ ಉಲ್ಲಂಘಿಸಲು ಸಾಧ್ಯವಿಲ್ಲ – ಡೇಟಾ ಸುರಕ್ಷತೆ ಬಗ್ಗೆ ರಾಜೀವ್ ಸ್ಪಷ್ಟನೆ
ರಾಣೇಬೆನ್ನೂರು ತಾಲೂಕಿನಲ್ಲಿ ಪ್ರಕಾಶ ಬುರಡಿಕಟ್ಟಿ ತಮ್ಮ ಮದುವೆಯ ಆಮಂತ್ರಣದ ಪತ್ರಿಕೆಯ ಜೊತೆಗೆ ಭಗವದ್ಗೀತೆ ಪುಸ್ತಕ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ. ನಾಳೆ ನಡೆಯುವ 132 ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಧಾಮೂರ್ತಿ, ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಗಳು ಸೇರಿದಂತೆ ನಾಡಿನ ಗಣ್ಯರು, ರಾಜಕಾರಣಿಗಳು ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಹಳ್ಳಕ್ಕೆ ಉರುಳಿದ KSRTC ಬಸ್ – 12 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ