ಜೊತೆ ಜೊತೆಯಲಿ ಧಾರಾವಾಹಿಯಿಂದ ನಟ, ಡಾ.ವಿಷ್ಣುವರ್ಧನ್ ಅಳಿಯ ಅನಿರುದ್ಧ ಹೊರ ನಡೆದ ವಿಚಾರ ಕನ್ನಡ ಕಿರುತೆರೆ ಜಗತ್ತಿನಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿ ಮಾಡಿದೆ. ಹಲವು ತಿಂಗಳಿಂದ ಈ ಕಿರಿಕಿರಿ ಇತ್ತಾದರೂ, ಧಾರಾವಾಹಿಯಿಂದಲೇ ಅವರನ್ನು ತಗೆದು ಹಾಕುವಷ್ಟರ ಮಟ್ಟಿಗೆ ಅದು ಹೋಗಿರಲಿಲ್ಲ. ಕೇವಲ ಧಾರಾವಾಹಿ ಸೆಟ್ ನಲ್ಲಿ ಆಗುತ್ತಿದ್ದ ಜಗಳ ಇದೀಗ ಬೀದಿಗೆ ಬಂದಿದೆ. ಹಾಗಾಗಿ ಅನಿವಾರ್ಯವಾಗಿ ಇಂಥದ್ದೊಂದು ನಿರ್ಧಾರವನ್ನು ತಗೆದುಕೊಳ್ಳಲು ಕಿರುತೆರೆ ನಿರ್ಮಾಪಕರ ಸಂಘ ಮುಂದಾಗಿದೆ.
ಕನ್ನಡ ಕಿರುತೆರೆ ನಿರ್ಮಾಪಕರ ಸಂಘಕ್ಕೆ ಜೊತೆ ಜೊತೆಯಲಿ ಧಾರಾವಾಹಿಯ ನಿರ್ಮಾಪಕ ಆರೂರು ಜಗದೀಶ್ ಕೊಟ್ಟ ದೂರಿನಲ್ಲಿ ಅನಿರುದ್ಧ ಮತ್ತು ಸೀರಿಯಲ್ ಟೀಮ್ ನಡುವೆ ಆಗಾಗ್ಗೆ ಗಲಾಟೆ ಆಗುತ್ತಲೇ ಇತ್ತಂತೆ. ಶೂಟಿಂಗ್ ಸೆಟ್ ಗೆ ತಡವಾಗಿ ಬರುವುದು, ಡೇಟ್ ಹೊಂದಾಣಿಕೆ ಮಾಡಿಕೊಳ್ಳದೇ ಇರುವುದು, ಬರೆದ ಡೈಲಾಗ್ ಅನ್ನು ಹೇಳಲ್ಲ ಅನ್ನುವುದು ಹೀಗೆ ನಾನಾ ರೀತಿಯಲ್ಲಿ ಅನಿರುದ್ಧ ಅವರು ಅಸಹಕಾರ ತೋರುತ್ತಿದ್ದರು ಎಂದು ಹೇಳಲಾಗಿದೆ.
ಅನಿರುದ್ಧ ಮತ್ತು ಸೀರಿಯಲ್ ಟೀಮ್ ನಡುವಿನ ಗಲಾಟೆಯು ವಾಹಿನಿಯ ಅಂಗಳಕ್ಕೂ ತಲುಪಿರುವ ವಿಚಾರವನ್ನು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಖಚಿತ ಪಡಿಸಿದ್ದಾರೆ. ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಅವರು, ‘ಈಗಾಗಲೇ ಈ ಗಲಾಟೆ ಇವತ್ತು, ನಿನ್ನೆಯದ್ದಲ್ಲ. ಹಲವು ತಿಂಗಳುಗಳಿಂದ ನಡೆಯುತ್ತಲೇ ಇದೆ. ವಾಹಿನಿಯ ಮುಖ್ಯಸ್ಥರು ಕೂಡ ಇಬ್ಬರನ್ನೂ ಕೂರಿಸಿಕೊಂಡು ಸಂಧಾನದ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ, ಅದು ಫಲ ಕೊಟ್ಟಿಲ್ಲ. ಹಾಗಾಗಿ ಅನಿವಾರ್ಯವಾಗಿ ಜಗದೀಶ್ ಅವರು ನಮ್ಮ ಸಂಘಕ್ಕೆ ದೂರು ನೀಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು
ಆಗಸ್ಟ್ 18 ರಂದು ಎಂದಿನಂತೆ ಶೂಟಿಂಗ್ ಗೆ ಬಂದ ಅನಿರುದ್ಧ ಅವರು ಡೈಲಾಗ್ ವಿಚಾರವಾಗಿ ಮತ್ತೆ ಕಿರಿಕಿರಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಮಾತಿಗೆ ಮಾತು ಬೆಳೆದು, ಸೀರಿಯಲ್ ತಂಡ ಪ್ರಮುಖರೊಬ್ಬರಿಗೆ ‘ಈ ಮೂರ್ಖನ ಜೊತೆ ಕೆಲಸ ಮಾಡಲ್ಲ’ ಎಂದು ಹೇಳುತ್ತಾ ಕ್ಯಾಮೆರಾಗೆ ಕೈ ಮುಗಿದು ಅಲ್ಲಿಂದ ಮನೆಗೆ ತೆರಳಿದರು ಎನ್ನುತ್ತಾರೆ ತಂಡದ ಸದಸ್ಯರು. ಈ ಬೆಳವಣಿಗೆಯೇ ಅನಿರುದ್ಧ ಅವರನ್ನು ಸೀರಿಯಲ್ ನಿಂದ ಕೈ ಬಿಡಲು ಕಾರಣವಾಗಿದೆಯಂತೆ.