ಉದಯ್ ಕೆ.ಮೆಹ್ತಾ ನಿರ್ಮಿಸುತ್ತಿರುವ, ಎ.ಪಿ.ಅರ್ಜುನ್ ಹಾಗೂ ಧ್ರುವಸರ್ಜಾ ಕಾಂಬಿನೇಶನ್ನಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ದ್ವಿತೀಯ ಚಿತ್ರ ಮಾರ್ಟಿನ್ ಬಿಡುಗಡೆಯ ದಿನಾಂಕ ಈಗ ಮುಂದಕ್ಕೆ ಹೋಗಿದೆ. ಈ ಹಿಂದೆ ಚಿತ್ರವನ್ನು ಸೆ.30ಕ್ಕೆ ರಿಲೀಸ್ ಮಾಡುವುದೆಂದು ನಿರ್ಧಾರವಾಗಿತ್ತು. ಅದಕ್ಕೆ ಎಲ್ಲಾ ರೀತಿಯ ಸಿದ್ದತೆಯೂ ನಡೆದಿತ್ತು, ಆದರೆ ಚಿತ್ರ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ.
ಅರ್ಜುನ್ ಸರ್ಜಾ ಅವರ ತಾಯಿ ಹಾಗೂ ಧ್ರುವಸರ್ಜಾ ಅವರ ಅಜ್ಜಿಯೂ ಆದ ಲಕ್ಷ್ಮಿದೇವಮ್ಮ ಅವರು ನಿಧನಕ್ಕೂ ಮುನ್ನ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಸಮಯದಲ್ಲಿ ಆತಂಕದಲ್ಲಿದ್ದ ಧ್ರುವಸರ್ಜಾ ಬಾಕಿಯಿದ್ದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ, 10-12 ದಿನಗಳ ಕಾಲ ಶೂಟ್ ಮಾಡಬೇಕಿದ್ದ ಆ ಭಾಗವನ್ನು ಸದ್ಯದಲ್ಲೇ ಚಿತ್ರೀಕರಿಸಲು ತಂಡ ಸಿದ್ದತೆ ಮಾಡಿಕೊಂಡಿದೆ. ಅಲ್ಲದೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸ್ವಲ್ಪ ಬಾಕಿ ಇರುವುದರಿಂದ ಅಂದುಕೊಂಡ ದಿನಾಂಕದಲ್ಲಿ ಚಿತ್ರ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ, ಸದ್ಯದಲ್ಲೇ ಮುಂದಿನ ದಿನಾಂಕವನ್ನು ತಿಳಿಸುವುದಾಗಿ ನಿರ್ದೇಶಕ ಎಪಿ ಅರ್ಜುನ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ:ಬೈಕಾಟ್ ಲಾಲ್ ಸಿಂಗ್ ಚಡ್ಡಾ: ಕ್ಯಾರೆ ಅನಬಾರದು ಎಂದು ಟಾಂಗ್ ಕೊಟ್ಟ ನಟಿ ಕರಿಷ್ಮಾ
ಅದ್ಧೂರಿ ಚಿತ್ರದ ನಂತರ ಧ್ರುವ ಸರ್ಜಾ ಮತ್ತೊಮ್ಮೆ ಅದೇ ನಿರ್ದೇಶಕರ ಜೊತೆ ಕೆಲಸ ಮಾಡಿರುವ ಚಿತ್ರ ಇದಾಗಿದ್ದು, ಪೊಗರು ಯಶಸ್ಸಿನ ಬಳಿಕ ತೆರೆಗೆ ಬರುತ್ತಿರುವ ಈ ಚಿತ್ರದ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ದೊಡ್ಡಮಟ್ಟದ ನಿರೀಕ್ಷೆಯಿದೆ. ಸ್ಯಾಂಡಲ್ವುಡ್ನ ಮತ್ತೊಂದು ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು ಎನಿಸಿಕೊಂಡಿರುವ ಮಾರ್ಟಿನ್ ಚಿತ್ರದಲ್ಲಿ ಧ್ರುವಸರ್ಜಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರದ ಚಿತ್ರೀಕರಣವನ್ನು ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ನಡೆಸಲಾಗಿದೆ.
ಉದಯ್ ಕೆ. ಮೆಹ್ತಾ ಅವರ ಬ್ಯಾನರ್ ನಲ್ಲೇ ದೊಡ್ಡ ಬಜೆಟ್ ಚಿತ್ರವಾಗಿ ಮಾರ್ಟಿನ್ ಹೊರಬರುತ್ತಿದ್ದು, ಈ ಚಿತ್ರದಲ್ಲಿ ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ಧ್ರುವಸರ್ಜಾಗೆ ಜೋಡಿಯಾಗಿ ಕಾಣಿಸಿ ಕೊಂಡಿದ್ದಾರೆ. ವಿಭಿನ್ನ ಪೋಸ್ಟರ್ನಿಂದಲೇ ಗಮನ ಸೆಳೆದಿರುವ ಮಾರ್ಟಿನ್ ಚಿತ್ರದ ಮೇಲೆಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಚಿತ್ರ ಯಾವಾಗ ಬರುತ್ತೋ ಅಂತ ಕಾಯ್ತಿದ್ದ ಅವರಿಗೆ ಕೊಂಚ ನಿರಾಸೆಯಾದರೂ ಪರಿಸ್ಥಿತಿಯನ್ನುಅರ್ಥಮಾಡಿಕೊಂಡು ಹೊಸ ರಿಲೀಸ್ ಡೇಟ್ಗಾಗಿ ಎದುರು ನೋಡುತ್ತಿದ್ದಾರೆ.
ಕಾಶ್ಮೀರದ ಐಸ್ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್ಗಳು, ಇದರಜೊತೆಗೆ ಮಾತಿನಭಾಗ ಸೇರಿ ೧೬ ದಿನಗಳವರೆಗೆ ಕಾಶ್ಮೀರದಲ್ಲೇ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಆ್ಯಕ್ಷನ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ಅವರು ಹೊಸ ಮಾದರಿಯ ಮೇಕಿಂಗ್ ಟ್ರೈ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸತ್ಯಹೆಗಡೆ ಅವರ ಛಾಯಾಗ್ರಹಣ, ಮಹೇಶ್ರೆಡ್ಡಿ ಅವರ ಸಂಕಲನ ಈ ಚಿತ್ರಕ್ಕಿದೆ.