ಬೆಂಗಳೂರು: ಕೋಟ್ಯಂತರ ಭಕ್ತರನ್ನು ಹೊಂದಿರುವ ಶಬರಿಮಲೆ (Sabarimala) ಅಯ್ಯಪ್ಪಸ್ವಾಮಿಯ ಸನ್ನಿಧಾನದಲ್ಲಿ ಈಗ ಧರ್ಮದಂಗಲ್ ಶುರುವಾಗಿದೆ. ಅಯ್ಯಪ್ಪ (Ayyappa) ನ ದರ್ಶನಕ್ಕೂ ಮುನ್ನಾ ಮಸೀದಿ ಭೇಟಿ ಈಗ ಹಿಂದೂ ಸಂಘಟನೆಗಳ ಕಣ್ಣು ಕೆಂಪಗಾಗಿಸಿದೆ.
ಕರಾವಳಿ ಬಳಿಕ ಬೆಂಗಳೂರಿಗೆ ಕಾಲಿಟ್ಟಿರುವ ಧರ್ಮ ದಂಗಲ್ ಕಿಚ್ಚು ದಿನೇ ದಿನೇ ಹಲವು ದೇಗುಲಗಳನ್ನು ವ್ಯಾಪಿಸುತ್ತಿದೆ. ಅಯ್ಯಪ್ಪನ ಸನ್ನಿಧಾನದಲ್ಲಿ ಈಗ ಧರ್ಮ ದಂಗಲ್ ಸ್ವರೂಪ ಪಡೆದುಕೊಂಡಿದೆ. ಮಾಲಾಧಾರಿಗಳು ಅಯ್ಯಪ್ಪನ 18 ಮೆಟ್ಟಿಲು ಹತ್ತುವ ಮುನ್ನ ಅಲ್ಲಿನ ವಾವರ್ (Vavar Mosque) ಮಸೀದಿಗೂ ಭೇಟಿ ಕೊಡುತ್ತಾರೆ. ಆದರೆ ಈಗ ಅಯ್ಯಪ್ಪ ಭಕ್ತರ ಈ ಮಸೀದಿ ಭೇಟಿ ಧರ್ಮ ದಂಗಲ್ಗೆ ಕಾರಣವಾಗಿದ್ದು, ಕೆಲ ಹಿಂದೂ ಸಂಘಟನೆಗಳು ಇದಕ್ಕೆ ಅಕ್ಷೇಪ ವ್ಯಕ್ತಪಡಿಸುತ್ತಿವೆ.
ಮಸೀದಿಗೆ ಭೇಟಿ ನೀಡೋದೇಕೆ..?: ಶಬರಿಮಲೆಯಲ್ಲಿ ದರ್ಶನಕ್ಕೂ ಮುನ್ನ ವಾವರ್ ಮಸೀದಿಗೆ ಭೇಟಿ ನೀಡೋದು ಕೆಲ ಭಕ್ತರ ವಾಡಿಕೆ. ಅಯ್ಯಪ್ಪನ ದರ್ಶನಕ್ಕೂ ಮುನ್ನ ವಾವರ್ ಸ್ವಾಮಿಗೆ ಮೊದಲ ನಮನ ಸಲ್ಲಿಕೆ. ಇದು ಸೌಹಾರ್ದತೆಯ ಸಂಕೇತ ಎನ್ನಲಾಗುತ್ತೆ. ಹುಲಿ ಹಾಲು (Tiger Milk) ತರಲು ಕಾಡಿಗೆ ಅಯ್ಯಪ್ಪ ಹೋದಾಗ ವಾವರ್ ಜೊತೆ ಕಾದಾಟ ನಡೆಸಲಾಗಿತ್ತು. ಕಾದಾಟದ ಬಳಿಕ ವಾವರ್ ಅಯ್ಯಪ್ಪನ ಸ್ನೇಹಿತನಾದ ಅನ್ನೋದು ಪ್ರತೀತಿ. ಹೀಗಾಗಿ ಇಲ್ಲಿ ಈಡುಗಾಯಿ ಒಡೆದು ಕಾಣಿಕೆ ಹಾಕೋದು ವಾಡಿಕೆಯಾಗಿದೆ. ಅಯ್ಯಪ್ಪನ ಭಕ್ತರನ್ನು ಕಾಡು ಪ್ರಾಣಿಗಳಿಂದ ವಾವರ್ ರಕ್ಷಿಸುತ್ತಾನೆ ಅನ್ನೋದು ನಂಬಿಕೆ ಇದೆ.
ಹಿಂದೂ ಸಂಘಟನೆ ವಿರೋಧ ಏಕೆ..?: ಇದೆಲ್ಲವೂ ಒಂದು ಕಟ್ಟುಕಥೆ. ಇದಕ್ಕೆ ಯಾವುದೇ ಪೌರಾಣಿಕ ಸಾಕ್ಷಿಗಳು ಇಲ್ಲ. ಮಸೀದಿಗೆ ಕಾಣಿಕೆ ಕೊಡುವುದರಿಂದ ಈ ಹಣ ದುರುಪಯೋಗವಾಗುತ್ತಿದೆ. ಹೀಗಾಗಿ ಭೇಟಿ ಕೊಡಬಾರದು, ಇದನ್ನು ನಂಬಬಾರದು. ಮೂರ್ತಿ ಪೂಜೆ ನಂಬದವರ ಬಳಿ ಕಾಣಿಕೆ ಹಾಕೋದು ತಪ್ಪು ಅನ್ನೋದು ಹಿಂದೂ ಸಂಘಟನೆಗಳ ವಾದವಾಗಿದೆ. ಇದನ್ನೂ ಓದಿ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಪ್ರವೇಶಿಸಲು ವಸ್ತ್ರ ಸಂಹಿತೆ ಜಾರಿಗೆ ಹಿಂದೂ ಜನಜಾಗೃತಿ ವೇದಿಕೆ ಒತ್ತಾಯ
ಶಬರಿಮಲೆಯ ಭಕ್ತರು ವಾವರ್ ಮಸೀದಿಯ ಭೇಟಿಯ ಬಗ್ಗೆ ಈಗ ವಿವಾದ ಸೃಷ್ಟಿಯಾಗಿದ್ದು ಇದರ ಬಗ್ಗೆ ಅಭಿಯಾನ ನಡೆಸೋಕೂ ಹಿಂದೂ ಸಂಘಟನೆಗಳು ರೆಡಿಯಾಗಿದೆ.