ಉಡುಪಿ: ಮೀನುಗಾರ ಮಹಿಳೆಯರಿಗೆ, ಮಳೆಯಿಂದ ರಕ್ಷಣೆ ನೀಡಲು ನಿರ್ಮಿಸಿದ್ದ ಶೆಡ್ ಅನ್ನು ನಗರಸಭೆ ಕೆಡವಿದೆ. ಮುನಿಸಿಪಾಲಿಟಿ ಸದಸ್ಯರು ಸ್ವಂತ ಖರ್ಚಲ್ಲಿ ಮಾಡಿದ್ದ ಅಭಿವೃದ್ಧಿ ಕೆಲಸವನ್ನು ಅಧಿಕಾರಿಗಳು ಕೆಡವಿದ್ದಕ್ಕೆ ಜನಾಕ್ರೋಶಕ್ಕೆ ಕಾರಣರಾಗಿದ್ದಾರೆ.
ಉಡುಪಿಯ ಕಿನ್ನಿಮುಲ್ಕಿ ಗೋಪುರ ಬಳಿ ಕಳೆದ 30 ವರ್ಷದಿಂದ ಮೊಗವೀರ ಮಹಿಳೆಯರು ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬೀದಿ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಾ ಬಿಸಿಲು ಮಳೆಯನ್ನು ಲೆಕ್ಕಿಸದೇ ಜೀವನವನ್ನು ಮಾಡುತ್ತಿದ್ದಾರೆ. ಸ್ಥಳೀಯ ನಗರಸಭಾ ಸದಸ್ಯೆ ತನ್ನ ಗೌರವ ಧನ 2 ಲಕ್ಷ ರೂ. ಬಳಸಿ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಕಳೆದ 2-3 ದಿನಗಳಿಂದ ಕೆಲಸ ಆಗುತ್ತಿತ್ತು. ಈ ಪುಟ್ಟ ಶೆಡ್ ನಿರ್ಮಿಸಲಾಗುತ್ತಿತ್ತು. ಉಡುಪಿ ನಗರಸಭೆ ಅಧಿಕಾರಿಗಳು ಶೀಟ್ ಶೆಡ್ ಅನ್ನು ಬುಲ್ಡೋಜರ್ ತಂದು ಕೆಡವಿ ಹಾಕಿದ್ದಾರೆ. ಇದನ್ನೂ ಓದಿ: ಮಕ್ಕಳ ಬುದ್ಧಿ ಕೆಡಿಸಿ ದೂರು: ಮುರುಘಾ ಮಠದ ವಕೀಲ ವಿಶ್ವನಾಥಯ್ಯ
ಈ ಬೆಳವಣಿಗೆ ವಿರುದ್ಧ ಸ್ಥಳೀಯ ಆಟೋ ಸ್ಟ್ಯಾಂಡ್ ನಗರಸಭಾ ಸದಸ್ಯೆ, ನೂರಾರು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆಯ ಅಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು. ಬಂದಿದ್ದ ಕಾರಿಗೆ ಮುತ್ತಿಗೆ ಹಾಕಿ ಸ್ಥಳದಿಂದ ತೆರಳದಂತೆ ದಿಗ್ಬಂಧನ ಮಾಡಿದ್ದಾರೆ. ಇದನ್ನೂ ಓದಿ: ಮಲಗಿದ್ದ ಮಹಿಳೆ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು – ಪವಾಡದ ರೀತಿ ಪಾರು
ಇದೊಂದು ಅಕ್ರಮ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರೋಡ್ ಪಕ್ಕದಲ್ಲೇ ಶೆಡ್ ಹಾಕಲಾಗಿದೆ. ಹೀಗಾಗಿ ನಾವು ತೆರವು ಮಾಡುತ್ತಿದ್ದೇವೆ ಎಂದು ನಗರಸಭೆ ಅಧಿಕಾರಿಗಳು ಹೇಳಿದ್ದಾರೆ. ಸುಮಾರು 2 ಗಂಟೆಗಳ ಕಾಲ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ವಾದ ಪ್ರತಿವಾದ ನಡೆಯಿತು. ನಂತರ ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ನಗರಸಭೆ ಆಡಳಿತದ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.