ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಮುರುಘಾ ಶ್ರೀಗಳು ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ ಇಲ್ಲ. ಮಠದ ವಿರೋಧಿಗಳು ಶ್ರೀಗಳ ವಿರುದ್ಧ ಮಕ್ಕಳ ಬುದ್ಧಿ ಕೆಡಿಸಿ ದೂರು ಕೊಡಿಸಿದ್ದಾರೆ ಎಂದು ಮಠದ ಪರ ವಕೀಲ ವಿಶ್ವನಾಥಯ್ಯ ತಿಳಿಸಿದರು.
ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ಮಧ್ಯ ಕರ್ನಾಟಕದ ಪ್ರತಿಷ್ಠಿತ ಮಠ ಎನಿಸಿರುವ ಚಿತ್ರದುರ್ಗದ ಮುರುಘಾ ಶರಣರಿಂದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಕ್ಕಳು ಮೈಸೂರಿನಲ್ಲಿ ದೂರು ನೀಡಿರುವುದು ಮಾಧ್ಯಮ ಮೂಲಕ ತಿಳಿದಿದೆ. ಈ ವಿಚಾರದಲ್ಲಿ ಶರಣರಿಗೆ ನೋವಾಗಿದೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಈ ಕುರಿತು ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದರು.
ಮಠದ ವಿರೋಧಿ ಶಕ್ತಿಗಳು, ಅತಿಯಾದ ಆಸೆಯಿಂದ ಮಕ್ಕಳನ್ನು ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಶ್ರೀಗಳ ವಿರುದ್ಧ ಮಕ್ಕಳ ಬುದ್ಧಿ ಕೆಡಿಸಿ ದೂರು ಕೊಡಿಸಿದ್ದಾರೆ. ಅವರು ಮಠದಿಂದ ಹೊರೆಗೆ ಹೋಗಿ, ದೂರು ಸಲ್ಲಿಸಿದ್ದಾರೆ. ಈ ದೂರಿನ ವಿಚಾರ ಪೂರ್ಣವಾಗಿ ಗೊತ್ತಿಲ್ಲ. ಆದರೆ ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ – ಮುರುಘಾ ಶರಣರ ವಿರುದ್ಧ ಕೇಸ್
ಏನಿದು ಪ್ರಕರಣ?:
ಮಠದ ಅಧೀನದಲ್ಲಿರೋ ಶಾಲಾ ಮಕ್ಕಳ ದುರ್ಬಳಕೆ ಮಾಡಿ ಶ್ರೀಗಳು ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಜ.1, 2019ರಿಂದ ಜೂ.6, 2022ವರೆಗೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬರನ್ನು ಶರಣರು ಮೂರೂವರೆ ವರ್ಷಗಳಿಂದ, ಮತ್ತೊಬ್ಬರನ್ನು ಒಂದೂವರೆ ವರ್ಷದಿಂದ ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದಾರೆ. ಈ ಕೃತ್ಯ ಉಳಿದ ಆರೋಪಿಗಳು ಸಾಥ್ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಆಪ್ತಸಮಾಲೋಚನೆ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರು ನೀಡಿದವರು ಯಾರು?:
ಉಚಿತ ಹಾಸ್ಟೆಲ್ನಲ್ಲಿದ್ದ ಇಬ್ಬರು ಪ್ರೌಢಶಾಲೆ ವಿದ್ಯಾರ್ಥಿನಿಯರು ಮೈಸೂರು ನಗರದಲ್ಲಿರುವ ಮಹಿಳಾ ಸಾಂತ್ವನ ಮತ್ತು ಮಕ್ಕಳ ವಸತಿ ಕೇಂದ್ರವಾದ ಒಡನಾಡಿ ಸಂಸ್ಥೆಗೆ ದೂರು ನೀಡಿದ್ದಾರೆ. ಈ ಸಂಬಂಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ಜಿಲ್ಲಾಧಿಕಾರಿ ಜೊತೆ ವಿದ್ಯಾರ್ಥಿನಿ ರೌಂಡ್ಸ್- ಡಿಸಿ ಆಡಳಿತ ವೈಖರಿ ಪರಿವೀಕ್ಷಣೆ