ಹಾಸನ: ನಮ್ಮ ಪಕ್ಷದ ಹಿರಿಯ ಮುಖಂಡರು, ಟಿಕೆಟ್ ಆಕಾಂಕ್ಷಿಗಳಾಗಿದ್ದವರಿಂದಲೇ ನನಗೆ ಸೋಲಾಯಿತು ಎಂದು ಆಲೂರು-ಸಕಲೇಶಪುರ ಕ್ಷೇತ್ರದ ಪರಾಜಿತ ಕಾಂಗ್ರೆಸ್ (Congress) ಅಭ್ಯರ್ಥಿ ಮುರಳಿ ಮೋಹನ್ (Murali Mohan) ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ರಾಜ್ಯ ನಾಯಕರಿಗೆ ಈಗಾಗಲೇ ವರದಿ ನೀಡಿದ್ದೇನೆ. ಸೋಲಿನಿಂದ ಯಾರೂ ಕುಗ್ಗುವುದು ಬೇಡ. ಮುಂದೆ ಜನಪರ ಕೆಲಸ ಮಾಡೋಣ. ಭಯಪಡುವ ಅವಶ್ಯಕತೆ ಇಲ್ಲ. ನಮ್ಮ ಸರ್ಕಾರದ ಅನುದಾನ ತಂದು, ಪೋಸ್ಟ್ ಮ್ಯಾನ್ ರೀತಿಯಲ್ಲಿ ಫಲಾನುಭವಿಗಳ ಕೆಲಸ ಮಾಡುವೆ ಎಂದರು.
ನಾನು ಸೋತಿದ್ದೇನೆ ಸತ್ತಿಲ್ಲ. ಮುಂದೆಯೂ ಆಲೂರು, ಕಟ್ಟಾಯ, ಸಕಲೇಶಪುರ ಜನರ ಜೊತೆ ಇರುವೆ. ಕೆಲ ಮುಖಂಡರು ಬಿಜೆಪಿ ಗೆಲ್ಲಲಿದೆ ಎಂದು ಜೆಡಿಎಸ್ಗೆ ಮತ ಹಾಕಿದರು. ಮತಗಳು ಶಿಫ್ಟ್ ಆಗಿದ್ದು ಒಂದು ಕಾರಣವಾದರೆ, ಅಪಪ್ರಚಾರ ನನ್ನ ಸೋಲಿಗೆ ಮತ್ತೊಂದು ಕಾರಣವಾಯಿತು. ಇನ್ನೂ ಕೆಲವರು ವೈಯಕ್ತಿಕ ದ್ವೇಷದಿಂದ ನನ್ನನ್ನು ಸೋಲಿಸಿದರು. ಆದರೂ ಭರವಸೆ ಇಟ್ಟು ನನಗೆ ಅವಕಾಶ ನೀಡಿದ ನಮ್ಮ ಪಕ್ಷದ ನಾಯಕರು, ನನ್ನ ಪರ ಕೆಲಸ ಮಾಡಿದ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದ ಹೇಳಿದರು. ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ವಿಚಾರ – ಪರಮೇಶ್ವರ್ಗೆ ಸಿಎಂ ಸ್ಥಾನಕ್ಕೆ ದಲಿತ ನಾಯಕರ ಪಟ್ಟು
ಸೋಲನ್ನು ನಾನು ಜೀರ್ಣಿಸಿಕೊಳ್ಳುವೆ. ಕೋವಿಡ್ ವೇಳೆ ಸಾಕಷ್ಟು ಕೆಲಸ ಮಾಡಿದ್ದೆ. ಆದರೂ ಸೋಲಾಗಿದೆ. ನಾನು ಧೈರ್ಯವಾಗಿದ್ದೇನೆ. ಸಕಲೇಶಪುರ ಕ್ಷೇತ್ರದಲ್ಲೇ ಉಳಿದು ಅಭಿವೃದ್ಧಿ ಜೊತೆಗೆ ಜನರ ಸಂಕಷ್ಟಕ್ಕೆ ಸ್ಪಂದಿಸುವೆ. ಹಿಂದೆ ಟಿಕೆಟ್ ಆಕಾಂಕ್ಷಿಗಳಾಗಿದ್ದವರೇ ನನಗೆ ಮುಳುವಾದರು. ನನ್ನ ಜಾತಿಯನ್ನೇ ಸುಳ್ಳು ಮಾಡಿದರು. ಅವರು ಮಾಡಿದ್ದನ್ನು ಅನುಭವಿಸುತ್ತಾರೆ. ನಾನು ಗೆದ್ದಿಲ್ಲದೇ ಇದ್ದರೂ ಕೈಲಾದಷ್ಟು ಕೆಲಸ ಮಾಡುವೆ. 42,800 ಮತ ನೀಡಿದ ಜನರಿಗೆ ಧನ್ಯವಾದ ಹೇಳಿದರು. ಇದನ್ನೂ ಓದಿ: ವಿನಯ್ ಕುಲಕರ್ಣಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡುವಂತೆ ಮುರುಘಾಮಠದ ಶ್ರೀಗಳ ಒತ್ತಾಯ