ದಾವಣಗೆರೆ: ಮುಗ್ಧ ಜನರಿಗೆ ಖೋಟಾ ನೋಟು ನೀಡಿ ವಂಚಿಸುತ್ತಿದ್ದ ಗ್ಯಾಂಗ್ ಒಂದನ್ನು ಬಂಧಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಭಾನುವಾರ ದಾವಣಗೆರೆಯ ಲೋಲೇಶ್ವರ ಜಾತ್ರೆಯ ಸಮಯದಲ್ಲಿ ಚಲಾವಣೆ ಮಾಡುತ್ತಿದ್ದ ಸಂದರ್ಭ ಸಾರ್ವಜನಿಕರಾದ ಮಲ್ಲಿಕಾರ್ಜುನ, ಕುರುವಪ್ಪ ಹಾಗೂ ಸೋಮಶೇಖರಪ್ಪ, ಆರೋಪಿ ಹನುಮಂತಪ್ಪನನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದರು.
ಆರೋಪಿಗಳು ಹೂವಿನ ಹಡಗಲಿ, ಕೊಟ್ಟೂರು ಹಾಗೂ ಸುತ್ತಮುತ್ತಲ ಪ್ರದೇಶಗಳ ಜಾತ್ರೆ ಹಾಗೂ ಸಂತೆಗಳಲ್ಲಿ ನೋಟುಗಳು ಚಲಾವಣೆ ಮಾಡಿರುವ ಅನುಮಾನವಿದೆ. ಖೋಟಾ ನೋಟುಗಳನ್ನು ಅಮಾಯಕ ರೈತರಿಗೆ ನೀಡುತ್ತಿದ್ದರು. ಜಾನುವಾರಗಳನ್ನು ಖರೀದಿ ಮಾಡಿ ನಂತರ ಖೋಟಾ ನೋಟುಗಳನ್ನು ನೀಡುತ್ತಿದ್ದರು.
ಖೋಟಾ ನೋಟು ಚಲಾವಣೆ ಮಾಡುವವರಿಗೆ ರೈತರು ಹಾಗೂ ಜಾನುವಾರು ವ್ಯಾಪಾರ ಮಾಡುವವರೇ ಟಾರ್ಗೆಟ್ ಆಗಿದ್ದು, ಆರೋಪಿಗಳು ನಕಲಿ ನೋಟುಗಳನ್ನು ಇಟ್ಟುಕೊಂಡು ವ್ಯಾಪಾರಕ್ಕೆ ಹೋಗುತ್ತಾರೆ. ರೈತರು ಕೇಳಿದ ಬೆಲೆಗೆ ಜಾನುವಾರಗಳನ್ನು ಕೊಂಡು ನಕಲಿ ನೋಟುಗಳನ್ನು ನೀಡಿ ಹೋಗುತ್ತಾರೆ. ಬೆಂಗಳೂರು, ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಹನುಮಂತಪ್ಪ, ಪುಟ್ಟಪ್ಪ ಎಂಬವರ ಮೇಲೆ ಪ್ರಕರಣಗಳು ದಾಖಲಾಗಿವೆ. ಈ ಗ್ಯಾಂಗ್ ನಲ್ಲಿ ಸಾಕಷ್ಟು ಜನರಿದ್ದು ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳು ರೈತರಿಗೆ ನೀಡುವ ನೋಟುಗಳಲ್ಲಿ ಗಾಂಧಿ ಚಿತ್ರ ಸರಿಯಾಗಿ ಕಾಣಿಸುವುದಿಲ್ಲ. ಅಲ್ಲದೆ ನೋಟು ತೀರಾ ತೆಳುವಾಗಿ ಇರುತ್ತವೆ. ಹಳ್ಳಿಯ ಮುಗ್ಧ ಜನರನ್ನು ಟಾರ್ಗೆಟ್ ಮಾಡಿ ಹೆಚ್ಚು ಹಣ ನೀಡಿ ಖೋಟಾ ನೋಟುಗಳನ್ನು ಜನರಿಗೆ ನೀಡಿ ಮೋಸ ಮಾಡುತ್ತಿದ್ದರು. ಇನ್ನು ಮುಂದೆ ರೈತರಿಗೆ ಹಾಗೂ ಮುಗ್ಧ ಜನರು ವ್ಯಾಪಾರ ಮಾಡುವಾಗ ನೋಟುಗಳನ್ನು ಪರಿಶೀಲನೆ ಮಾಡಿ ತೆಗೆದುಕೊಳ್ಳಬೇಕು, ಏನಾದರೂ ಅನುಮಾನಗಳು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕು ಎಂದು ಜಿಲ್ಲಾ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.