ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಪಘಾತದಲ್ಲಿ ಮೃತಪಟ್ಟ ಅಭಿಮಾನಿಯ ಸಹೋದರಿಯರ ಮದುವೆ ಖರ್ಚು ವಹಿಸಿಕೊಂಡಿದ್ದಾರೆ.
ಇತೀಚೆಗಷ್ಟೇ ದರ್ಶನ್ ಅವರ ಪುತ್ರ ವಿನೀಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ದರ್ಶನ್ ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟಿದ್ದ ಅಭಿಮಾನಿ ರಾಕೇಶ್ ಕುಟುಂಬಕ್ಕೆ ಸಹಾಯ ಮಾಡಲು ನಿರ್ಧರಿಸಿದ್ದರು.
ಕಳೆದ ವರ್ಷ ವಿನೀಶ್ ಹುಟ್ಟುಹಬ್ಬ ಆಚರಿಸಲು ರಾಕೇಶ್ ರಾಜರಾಜೇಶ್ವರಿ ನಗರಕ್ಕೆ ಬರುತ್ತಿದ್ದರು. ಆ ವೇಳೆ ಅಪಘಾತವಾಗಿ ರಾಕೇಶ್ ಮೃತಪಟ್ಟಿದ್ದರು. ಹೀಗಾಗಿ ಮಗನ ಹುಟ್ಟುಹಬ್ಬದ ದಿನ ಈ ರೀತಿಯ ಘಟನೆ ನಡೆದಿರುವುದರಿಂದ ದರ್ಶನ್ ತುಂಬಾ ಬೇಸರ ಮಾಡಿಕೊಂಡಿದ್ದರು. ಇದನ್ನೂ ಓದಿ: ವಾಹನ ಚಾಲನೆ ವೇಳೆ ಜಾಗೃತರಾಗಿರಿ: ಅಭಿಮಾನಿಗಳಲ್ಲಿ ದಚ್ಚು ಮನವಿ
ಅಂದು ದರ್ಶನ್ ಅಭಿಮಾನಿ ರಾಕೇಶ್ ಕುಟುಂಬಕ್ಕೆ ಎರಡು ಲಕ್ಷ ರೂ. ಸಹಾಯ ಕೂಡ ಮಾಡಿದ್ದರು. ಈಗ ಅದೇ ಕುಟುಂಬಕ್ಕೆ ದರ್ಶನ್ ಆಸರೆ ಆಗಿ ನಿಂತಿದ್ದಾರೆ. ಅಕ್ಟೋಬರ್ 31 ರಂದು ನಡೆದ ವಿನೀಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ರಾಕೇಶ್ ಕುಟುಂಬದವರನ್ನು ದರ್ಶನ್ ಕರೆಯಿಸಿಕೊಂಡಿದ್ದರು. ಆಗ ರಾಕೇಶ್ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಹಣ ಸಹಾಯ ಮಾಡುವುದಾಗಿ ದರ್ಶನ್ ಭರವಸೆ ನೀಡಿದ್ದಾರೆ.
ರಾಕೇಶ್ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈತನಿಗೆ ಕೀರ್ತನಾ ಮತ್ತು ನಾಗವೇಣಿ ಎಂಬ ಸಹೋದರಿಯರು ಇದ್ದಾರೆ. ಹೀಗಾಗಿ ಇಂದು ರಾಕೇಶ್ ಅಗಲಿರುವ ಕಾರಣ ದರ್ಶನ್ ಇಬ್ಬರು ಸಹೋದರಿಯರ ಮದುವೆ ಖರ್ಚನ್ನು ವಹಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ದರ್ಶನ್ ಮಾನವೀಯತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.