ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಚಿತ್ರ ಅಮರ್. ಖುದ್ದು ಅಂಬರೀಶ್ ಅವರೇ ಮುಂದೆ ನಿಂತು, ಬಲು ಆಸ್ಥೆಯಿಂದ ಆರಂಭಿಸಿದ್ದ ಚಿತ್ರವಿದು. ಈಗ ಅಂಬಿ ಮರೆಯಾಗಿದ್ದರೂ ಅವರ ನೆನಪಿನ ನೆರಳಲ್ಲಿಯೇ ಅಚ್ಚುಕಟ್ಟಿನಿಂದ ಚಿತ್ರೀಕರಣ ಮುಗಿಸಿಕೊಳ್ಳುತ್ತಿರೋ ಅಮರ್ ಚಿತ್ರವೀಗ ಹಾಡುಗಳಿಂದ ಜನರನ್ನು ಸೆಳೆಯುತ್ತಿದೆ.
ಈಗಾಗಲೇ ಈ ಸಿನಿಮಾದ ಮೂರು ಹಾಡುಗಳು ಬಿಡುಗಡೆಯಾಗಿವೆ. ಅವೆಲ್ಲವೂ ಈಗ ಟ್ರೆಂಡ್ ಸೆಟ್ ಮಾಡಿವೆ. ಅದಾಗಲೇ ಮತ್ತೊಂದು ಹಾಡಿಗಾಗಿ ಚಿತ್ರತಂಡ ಭರ್ಜರಿಯಾಗೇ ಶ್ರಮ ಹಾಕಿದೆ. ವಿಶೇಷ ಅಂದ್ರೆ ಈ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಚಿತಾ ರಾಮ್ ಒಟ್ಟಾಗಿ ಹೆಜ್ಜೆ ಹಾಕಿದ್ದಾರೆ. ಇವರಿಗೆ ನಿರೂಪ್ ಭಂಡಾರಿ ಕೂಡಾ ಸಾಥ್ ನೀಡಿದ್ದಾರೆ.
ಇದು ಎಲ್ಲ ರೀತಿಯಲ್ಲಿಯೂ ಸ್ಪೆಷಲ್ ಸಾಂಗು. ಇದನ್ನು ಕಿರಣ್ ಕಾವೇರಪ್ಪ ಬರೆದಿದ್ದಾರೆ. ಈ ಹಾಡಿಗೆ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಧ್ವನಿಯಾಗಿದ್ದಾರೆ. ಬಹುಕಾಲದ ನಂತರ ಕೊಡವ ಭಾಷೆಯ ಹಾಡೊಂದು ಈ ಮೂಲಕ ಅಣಿಗೊಂಡಿದೆ. ಈ ಹಾಡನ್ನು ಕೊಡವರಿಗೆ ಅರ್ಪಿಸಲು ಚಿತ್ರತಂಡ ನಿರ್ಧರಿಸಿದೆಯಂತೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಮರ್ ಚಿತ್ರದಲ್ಲಿ ಪ್ರಧಾನ ಪಾತ್ರವೊಂದನ್ನು ನಿರ್ವಹಿಸಿದ್ದಾರೆಂಬ ಬಗ್ಗೆ ಸುದ್ದಿಯಾಗಿತ್ತು. ಈ ಕಾರಣದಿಂದಲೇ ಅಮರ್ ಬಗ್ಗೆ ದರ್ಶನ್ ಅಭಿಮಾನಿಗಳೂ ಆಕರ್ಷಿತರಾಗಿದ್ದರು. ಆದರೆ ದರ್ಶನ್ ಹಾಡೊಂದರಲ್ಲಿಯೂ ನಟಿಸಿದ್ದಾರೆಂಬ ವಿಚಾರ ಅಭಿಮಾನಿಗಳ ಪಾಪಿಗೆ ಡಬಲ್ ಸಂಭ್ರಮವನ್ನು ಕೊಡಮಾಡಿದೆ.
ಅಂಬರೀಶ್ ಅವರು ನಂಬಿಕೆಯಿಟ್ಟು ಈ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ನಾಗಶೇಖರ್ ಅವರಿಗೆ ವಹಿಸಿದ್ದರು. ಆ ಜವಾಬ್ದಾರಿಯನ್ನು ಗಂಭೀರವಾಗಿಯೇ ವಹಿಸಿಕೊಂಡಿರೋ ನಾಗಶೇಖರ್ ಅಂಬರೀಶ್ ಅವರ ಅನುಪಸ್ಥಿತಿಯಲ್ಲಿ ಅಮರ್ ನನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಶ್ರಮಿಸುತ್ತಿದ್ದಾರೆ. ಅದರ ಭಾಗವಾಗಿಯೇ ಈ ವಿಶೇಷ ಹಾಡು ರೆಡಿಯಾಗಿದೆ.