ಚಿತ್ರದುರ್ಗ: ನಾಲೆ ಕಾಮಗಾರಿಗೆ ರೈತನ ಜಮೀನು ವಶಪಡಿಸಿಕೊಂಡು ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದಕ್ಕೆ ಕಂದಾಯ ಇಲಾಖೆ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡುವಂತೆ ಚಿತ್ರದುರ್ಗ ಜಿಲ್ಲಾ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಚೆಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ರೈತ ಪಾಲಣ್ಣ ಅವರ ಎರಡೂವರೇ ಎಕರೆ ಜಮೀನಿನಲ್ಲಿ ನಾಲೆ ನಿರ್ಮಾಣ ಮಾಡಲಾಗಿತ್ತು. ಆದರೆ ಕಳೆದ 30 ವರ್ಷಗಳಿಂದ 40 ಸಾವಿರ ರೂ. ಪರಿಹಾರದ ಹಣ ನೀಡದೆ ಕಂದಾಯ ಇಲಾಖೆ ಅಧಿಕಾರಿಗಳು ಸತಾಯಿಸುತ್ತಿದ್ರು.
ಅಧಿಕಾರಿಗಳ ವರ್ತನೆಗೆ ಬೇಸತ್ತ ರೈತ ಪಾಲಣ್ಣ ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ 30 ವರ್ಷದಿಂದ ವಿಳಂಬ ಮಾಡುತ್ತ ಬಂದಿದ್ದರಿಂದ ಬಡ್ಡಿ, ಅಸಲು ಸೇರಿ 2.29 ಲಕ್ಷ ರೂ. ನೀಡುವಂತೆ ಜಿಲ್ಲಾ ಸಿವಿಲ್ ನ್ಯಾಯಾಲಯ ಆದೇಶ ನೀಡಿತ್ತು. ಆದರೆ ಇದನ್ನು ಲೆಕ್ಕಿಸದ ಅಧಿಕಾರಿಗಳು ಪಾಲಣ್ಣ ಅವರಿಗೆ ಹಣ ನೀಡದೇ ಕಾಲ ದೂಡುತ್ತಿದ್ದರು. ಕೋರ್ಟ್ ಆದೇಶವನ್ನು ಪರಿಗಣಿಸದ ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ಹಿಡಿದ ಜಿಲ್ಲಾ ಸಿವಿಲ್ ನ್ಯಾಯಾಲಯ ಚಿತ್ರದುರ್ಗ ಉಪವಿಭಾಗಧಿಕಾರಿ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದೆ.