ಹಾಸನ: ದೇವರ ಉತ್ಸವದಲ್ಲಿ ಅಡುಗೆ ಮಾಡುವ ಪಾತ್ರೆ ವಿಚಾರಕ್ಕೆ ಶುರುವಾದ ಜಗಳದಿಂದ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆ, ಆಲೂರು ತಾಲೂಕಿನ ಅಡಿಬೈಲು ಗ್ರಾಮದಲ್ಲಿ ನಡೆದಿದೆ.
ಅಡಿಬೈಲು ರಂಗನಾಥಸ್ವಾಮಿ ಉತ್ಸವದಲ್ಲಿ ಅಡುಗೆ ಮಾಡುವ ಪಾತ್ರೆ ವಿಚಾರವಾಗಿ ದಿನೇಶ್ ಹಾಗೂ ರಘು ಕುಟುಂಬದವರ ನಡುವೆ ಭಾನುವಾರ ರಾತ್ರಿ ಜಗಳ ನಡೆದಿದೆ. ಈ ವೇಳೆ ಸ್ಥಳೀಯರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದರು. ಈ ಬಗ್ಗೆ ಸೋಮವಾರ ಆಲೂರು ಪೊಲೀಸ್ ಠಾಣೆಗೆ ದಿನೇಶ್ ದೂರು ನೀಡಿದ್ದರು. ಇದರಿಂದ ಕೋಪಗೊಂಡಿದ್ದ ರಘು ಹಾಗೂ ಅಣ್ಣ-ತಮ್ಮಂದಿರು ನಿನ್ನೆ ದಿನೇಶ್ ಹಾಗೂ ಪುಟ್ಟರಾಜು ಮನೆಗೆ ನುಗ್ಗಿ ಕಲ್ಲು, ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮುತಾಲಿಕ್ ಬರುವುದಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕೊರಗಜ್ಜನಿಗೆ ದೂರು
ಘಟನೆಯಲ್ಲಿ ಪುಟ್ಟರಾಜು, ದಿನೇಶ್, ಗೀತಾ, ಕೃಷ್ಣಾಚಾರಿ ಎಂಬುವವರಿಗೆ ಗಂಭೀರ ಗಾಯವಾಗಿದೆ. ಅಲ್ಲದೇ ಮನೆಗೆ ನುಗ್ಗಿ ಹಲ್ಲೆ ಮಾಡುವ ವೀಡಿಯೋ ವೈರಲ್ ಆಗಿದೆ. ಗಾಯಾಳುಗಳಿಗೆ ಆಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರಘು, ಮಂಜುನಾಥ್, ದರ್ಶನ್, ಅಪ್ಪಣ್ಣ, ಚಂದು, ಮಂಜ, ದೇವರಾಜು, ಮೋಹನ್, ಪ್ರೇಮ ಎಂಬುವವರ ವಿರುದ್ಧ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದ್ದು, ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅರುಂಧತಿ ನಕ್ಷತ್ರ ಬದಲು ಪುನೀತ್ ಫೋಟೋ ನೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ