ಚಿಕ್ಕಬಳ್ಳಾಪುರ: ಇಂದು ಮಾಂಸಹಾರ ತಿಂದು ನಾಳೆ ದೇವಾಲಯಕ್ಕೆ ಹೋಗಬಹುದಾ? ಮಧ್ಯಾಹ್ನ ಮಂಸಾಹಾರ ತಿಂದು ಸಂಜೆ ಹೋಗಬಾರದಾ? ನಾನು ಯಾರಿಗೂ ಭಯಪಡಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಪ್ರಯುಕ್ತ ಶೋಷಿತ ಸಮುದಾಯಗಳ ಅಭಿವೃದ್ಧಿ ಟ್ರಸ್ಟ್ ವತಿಯಿಂದ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾಂಸಾಹಾರ ಸೇವಿಸಿ ಕೊಡಗಿನ ದೇವಸ್ಥಾನಕ್ಕೆ ಭೇಟಿ ನೀಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಊಟ ಮಾಡಿದ್ದು ಸುದರ್ಶನ್ ಗೆಸ್ಟ್ ಹೌಸ್ನಲ್ಲಿ. ಸಾಯಂಕಾಲ ಹೋಗುವಾಗ ದೇವಾಲಯಕ್ಕೆ ಹೋಗಿದ್ದೇನೆ. ದೇವರು ಇಂತಹದ್ದೆ ತಿನ್ನು ಅಂತ ಹೇಳಿದ್ದಾರಾ? ಬಿಜೆಪಿಯವರಿಗೆ ಮೊಸರಲ್ಲಿ ಕಲ್ಲು ಹುಡುಕಿ ಬೆಂಕಿ ಹಾಕುವುದೇ ಕೆಲಸ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮಧ್ಯಾಹ್ನ ನಾಟಿ ಕೋಳಿ ಊಟ ಮಾಡಿ ಸಂಜೆ ದೇವಸ್ಥಾನಕ್ಕೆ ಭೇಟಿ ಕೊಟ್ರಾ ಸಿದ್ದರಾಮಯ್ಯ?
ಸಂಪತ್ ಪಕ್ಕಾ ಆರ್ ಎಸ್ ಎಸ್ ಕಾರ್ಯಕರ್ತ. ಅವನ ಕೈಯಲ್ಲಿ ಬಲವಂತವಾಗಿ ಕಾಂಗ್ರೆಸ್ ಕಾರ್ಯಕರ್ತ ಅಂತ ಹೇಳಿಸಿದ್ದಾರೆ. ಜಿ ವಿಜಯಾ ಅವನು ಯಾರು? ಗೊತ್ತಿಲ್ಲ ಅಂತಾನೆ. ನೋಡೇ ಇಲ್ಲ ಅಂತಾನೆ. ನಾನು ಪ್ರವಾಹ ಪರಿಸ್ಥಿತಿ ಹಾನಿ ನೋಡಲು ಹೋಗಿದ್ದು. ಇದಕ್ಕೆ ತಡೆ ಒಡ್ಡಿದ್ದು ಬಿಜೆಪಿ, ಆರ್ಎಸ್ಎಸ್ ಮತ್ತು ಹಿಂದೂ ಕಾರ್ಯಕರ್ತರು. ಇದು ಸರ್ಕಾರಿ ಪ್ರಾಯೋಜಿತ ತಡೆ ಎಂದು ವಾಗ್ದಾಳಿ ನಡೆಸಿದರು.
ಟಿಪ್ಪುವನ್ನು ಈಗ ಬಿಜೆಪಿಯವರು ಬಹಳ ವಿರೋಧ ಮಾಡುತ್ತಿದ್ದಾರೆ. ಹಿಂದೆ ಯಡಿಯೂರಪ್ಪ ಏನ್ ಮಾಡಿದ್ರು ಮಾತಾಡಿದ್ರು ಗೊತ್ತಾ? ಜಗದೀಶ್ ಶೆಟ್ಟರ್ ಏನ್ ಹೇಳಿದ್ದಾರೆ ಗೊತ್ತಾ? ಆಗ ಬಿಜೆಪಿ ಯವರಿಗೆ ಟಿಪ್ಪು ಒಳ್ಳೆಯವನು ಆಗಿದ್ನಾ? ಟಿಪ್ಪು ಪೇಟಾ ಹಾಕ್ಕೊಂಡು ಕತ್ತಿ ಹಿಡ್ಕೊಂಡು ಪೋಸ್ ಕೊಡಲಿಲ್ವಾ? ಆಗ ಶೋಭ ಕರಂದ್ಲಾಜೆ ಜೊತೆಯಲ್ಲಿ ಇದ್ರಲ್ಲ ಎಂದು ಹೇಳಿ ಕಮಲ ನಾಯಕರನ್ನು ಟೀಕಿಸಿದರು.