– ಕಾಂಗ್ರೆಸ್ ಆಡಳಿತದಲ್ಲಿ ದೇಶಕ್ಕೆ ಕೊಟ್ಟ ಕೊಡುಗೆಗಳು 4
ಬಾಗಲಕೋಟೆ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಕಣ್ಣೀರಿನಿಂದ ಕಾಂಗ್ರೆಸ್ ಸರ್ವನಾಶವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಯಡಿಯೂರಪ್ಪ ಕಣ್ಣೀರಲ್ಲಿ ಬಿಜೆಪಿ ಕೊಚ್ಚಿಕೊಂಡು ಹೋಗುತ್ತೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸಿಎಂ ಮಾಡಲಿಲ್ಲ ಅಂತ ಖರ್ಗೆ ಕಣ್ಣೀರು ಅದಕ್ಕಿಂತ ಜಾಸ್ತಿ ಇದೆ. ಇತ್ತ ಸೋಲಿಸಿದ್ದೀರಿ ಅಂತ ಪರಮೇಶ್ವರ್ ಕಣ್ಣೀರು ಅದಕ್ಕಿಂತ ಜಾಸ್ತಿ ಇದೆ. ಖರ್ಗೆ ಮತ್ತು ಪರಮೇಶ್ವರ್ ಕಣ್ಣೀರಲ್ಲಿ ನಿಮ್ಮ ಪಾರ್ಟಿ ಸರ್ವನಾಶವಾಗಿದೆ. ಅದಕ್ಕೇನು ಉತ್ತರ ಕೊಡುತ್ತೀರಿ ನೀವು ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು.
ಇಂದು ಪರಮೇಶ್ವರ್, ಖರ್ಗೆ ಬಗ್ಗೆ ಡಿಕೆಶಿಗೆ ಚಿಂತೆಯಿಲ್ಲ. ಸಿದ್ದರಾಮಯ್ಯನ ಬಗ್ಗೆ ಚಿಂತೆ ಇರೋದು. ಇವತ್ತು ಸಿದ್ದರಾಮಯ್ಯ ಡಿಕೆಶಿ ಸಿಎಂ ಸೀಟಿಗೆ ಟವೆಲ್ ಹಾಕಿಕೊಂಡು ಕೂತಿದ್ದಾರೆ. ಈ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಎರಡು ಹೋಳಾಗುತ್ತದೆ. ಎರಡು ತುಂಡಾಗುತ್ತದೆ. ಸಿದ್ದರಾಮಯ್ಯನನ್ನು ಸಿಎಂ ಮಾಡೋದಕ್ಕೆ ಡಿಕೆಶಿ ಯಾವ ಕಾರಣಕ್ಕೂ ಬಿಡೋದಿಲ್ಲ. ಡಿಕೆಶಿಯನ್ನು ಅಧ್ಯಕ್ಷನಾಗಿ ಮುಂದುವರಿಯೋದಕ್ಕೆ ಸಿದ್ದರಾಮಯ್ಯ ಬಿಡೋದಿಲ್ಲ ಇದು ಕಾಂಗ್ರೆಸ್ ಎಂದು ಕಾಲೆಳೆದರು. ಇದನ್ನೂ ಓದಿ: ಬಿಜೆಪಿ ಜೊತೆ ಕ್ಷಮೆ ಕೇಳಿದ ಶಾಸಕ ಜಮೀರ್!
ಹಾನಗಲ್, ಸಿಂದಗಿ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಒಂದು ಕೊನೆಯ ದಿನ. ನಿನ್ನೆ ಹಾನಗಲ್ ನಲ್ಲಿ ಪ್ರಚಾರ ಮಾಡಿದ್ದೆ. ಇಂದು ಸಿಂದಗಿಯಲ್ಲಿ ರೋಡ್ ಶೋ ಮಾಡ್ತೇನೆ. ಎರಡೂ ಕ್ಷೇತ್ರದಲ್ಲಿ ಅತೀ ಮತಗಳಿಂದ ಬಿಜೆಪಿ ಗೆಲ್ಲುತ್ತೆ. ಎರಡೂ ಕಡೆಗಳಲ್ಲೂ ಬಿಜೆಪಿಯ ಪರವಾಗಿದೆ. ಜನ ಕಾಂಗ್ರೆಸ್ ತಿರಸ್ಕಾರ ಮಾಡಿ ಬಿಜೆಪಿ ಕಡೆಗೆ ವಿಶ್ವಾಸದಿಂದ ನೋಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಪಟಾಕಿ ಅಂಗಡಿಯಲ್ಲಿ ಸ್ಫೋಟ- ದೀಪಾವಳಿಗೆ ಖರೀದಿಸಲು ಬಂದಿದ್ದ ಐವರು ಸಾವು!
ಕಳೆದ 7 ವರ್ಷಗಳಲ್ಲಿ ಮೋದಿ ಆಡಳಿತದಿಂದ ಜಗತ್ತಿನಲ್ಲಿ ಭಾರತದ ಕೀರ್ತಿ ಎತ್ತರಕ್ಕೆ ಏರಿದೆ. ಕೋವಿಡ್ ಸಂದರ್ಭದಲ್ಲಿ ಮೋದಿ ತೆಗೆದುಕೊಂಡ ತೀರ್ಮಾನಗಳು, ಜನಪರ ಪರವಾದ ಯೋಜನೆಗಳು, ಅಭಿವೃದ್ಧಿ ಕಾರ್ಯಗಳಿಗೆ ಕೊಟ್ಟ ವೇಗಗಳು, ಭ್ರಷ್ಟಾಚಾರ ರಹಿತ ಆಡಳಿತ, ಭಾರತದ ಸ್ವಾಭಿಮಾನ ಭರಿತ ಚಿಂತನೆಗಳು ಜೀವನ, ನಮ್ಮ ಸಂಸ್ಕೃತಿ ಉಳಿಬೇಕಾದ್ರೆ ಅದು ಬಿಜೆಪಿಯಿಂದ, ನರೇಂದ್ರ ಆಡಳಿತದಿಂದ ಸಾಧ್ಯ ಎನ್ನುವ ವಿಶ್ವಾಸ ಜನರಲ್ಲಿ ಮೂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: JDSಗೆ ಬದ್ದತೆ ಇಲ್ಲ, ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ: ದಿನೇಶ್ ಗುಂಡೂರಾವ್
ಕಾಂಗ್ರೆಸ್ ಪಕ್ಷದ ಸುದೀರ್ಘ ಆಡಳಿತದಲ್ಲಿ ದೇಶಕ್ಕೆ ಕೊಟ್ಟ ಕೊಡುಗೆಗಳು ನಾಲ್ಕು. ಒಂದು ಭಯೋತ್ಪಾದಕ, ಎರಡನೇಯದ್ದು ಭ್ರಷ್ಟಾಚಾರ, ಮೂರನೇಯದ್ದು ಬಡತನ, ನಾಲ್ಕನೆಯದ್ದು ನಿರುದ್ಯೋಗ. ಈ ನಾಲ್ಕು ಕಾಂಗ್ರೆಸ್ಸಿನ ಸೃಷ್ಠಿಗಳು ಅನ್ನೋದು ಜನರ ಮನಸ್ಸಿಗೆ ತಲುಪಿದೆ. ಈ ಏಳೂವರೆ ವರ್ಷಗಳಲ್ಲಿ ಅದಕ್ಕೆ ನರೇಂದ್ರ ಮೋದಿ ಉತ್ತರವನ್ನು ಕೊಟ್ಟಿದ್ದಾರೆ. ಭಯೋತ್ಪಾದನೆ, ಭ್ರಷ್ಟಾಚಾರ ಮುಕ್ತ ಆಗಿದೆ. ಬಡತನ ನಿರ್ಮೂಲನೆಗೆ ಪ್ರಯತ್ನಗಳು ಸಾಗಿವೆ. ಉದ್ಯೋಗ ಸೃಷ್ಟಿ ಮಾಡುವಂತಹ ಸಮಯ ಬಂದಿದೆ ಎನ್ನುವ ವಿಶ್ವಾಸವಿದೆ ಎಂದರು. ಇದನ್ನೂ ಓದಿ: ಪಕ್ಷದಲ್ಲಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕುವವರು ತಾಯಿ ದ್ರೋಹಿಗಳು: ಸಿದ್ದರಾಮಯ್ಯ
ಇದೇ ವೇಳೆ ಉಪಚುನಾವಣೆಯಲ್ಲಿ ಗೋಣಿಚೀಲದಲ್ಲಿ ಹಣ ತಂದು ಹಂಚಿದ್ದಾರೆ ಎಂಬ ಕೈನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ನೀವು ಸುದೀರ್ಘ ಅವಧಿಯಲ್ಲಿ ರಾಜಕಾರಣ ಮಾಡಿದ್ದೀರಿ. ಹಾಗಾದರೆ ಎಲ್ಲ ಚುನಾವಣೆಯಲ್ಲಿ ಹಣ ಹಂಚಿ ಗೆದ್ರಾ? ಕನಕಪುರದಲ್ಲಿ ಹಣದಲ್ಲಿ ಗೆದ್ದಿರಾ? ಬಾದಾಮಿಯಲ್ಲಿ ಹಣದಲ್ಲಿ ಗೆದ್ದಿರಾ? ಹಣ ಕಡಿಮೆಯಾಗಿ ವರುಣಾ ಕ್ಷೇತ್ರಕ್ಕೆ ಓಡಿದ್ದೀರಾ? ಇದಕ್ಕೆಲ್ಲ ಉತ್ತರ ಅವರೆ ಕೊಡಲಿ. ಅವರು ಅದರಲ್ಲೇ ಗೆದ್ದಿದ್ರೆ ಸರಿ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಟಾಂಗ್ ನೀಡಿದರು. ಇದನ್ನೂ ಓದಿ: ಸಿಂದಗಿ, ಹಾನಗಲ್ ಉಪಚುನಾವಣಾ ಕದನ – ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ