ಬೆಂಗಳೂರು: ಇದು ಬಿಬಿಎಂಪಿ ಬಜೆಟ್ಟೋ..? ರಾಜ್ಯದ ಬಜೆಟ್ಟೋ..?. ಇದನ್ನು ನಾವು ಸಹಿಸೋದಕ್ಕೆ ಆಗಲ್ಲ. ತಪ್ಪನ್ನು ಸರಿಪಡಿಸೋದಕ್ಕೆ ಸಮಯ ಇದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎಚ್.ಕೆ.ಪಾಟೀಲ್ ಕಿಡಿ ಕಾರಿದರು.
ಕುಮಾರಸ್ವಾಮಿ ಅವರ ಬಜೆಟ್ನಲ್ಲಿ ಉತ್ತರ ಕರ್ನಾಟಕ, ಅಲ್ಪಸಂಖ್ಯಾತರನ್ನ ಕಡೆಗಣಿಸಲಾಗಿದೆ ಎನ್ನುವ ಟೀಕೆಯನ್ನು ಇಂದು ಕೂಡಾ ಸದನದಲ್ಲಿ ಹೊರಹಾಕಿದರು.
ಅಂಕಿ ಅಂಶಗಳ ಮೂಲಕ ಬಜೆಟ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಜೆಟ್ನಲ್ಲಿ ಶೇಕಡಾ 82ರಷ್ಟು ಅನುದಾನವನ್ನು ಬೆಂಗಳೂರಿಗೆ ಮೀಸಲಿಡಲಾಗಿದೆ. ಹೀಗಾಗಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಇದರಿಂದ ಸಮ್ಮಿಶ್ರ ಸರ್ಕಾರಕ್ಕೆ ಟೀಕೆಗಳು ಕೇಳಿಬರುತ್ತಿವೆ. ಇದನ್ನು ಸರಿಪಡಿಸಿ ಅಂತಾ ಡಿಸಿಎಂ ಪರಮೇಶ್ವರ್ ಅವರಿಗೆ ಒತ್ತಾಯಿಸಿದರು.
ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ರಾಜುಗೌಡ, ಬಿಜೆಪಿಯವರಿಗಿಂತ ಜೆಡಿಎಸ್ನವರು ನಿಜವಾದ ಹಿಂದೂವಾದಿಗಳು. ರೇವಣ್ಣ ಅವರ ಹೋಮ-ಹವನದಿಂದಲೇ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದು. ಹಾಗಾಗಿ, ಬಜೆಟ್ನಲ್ಲಿ ಹೋಮ-ಹವನಕ್ಕೂ 20% ಹಣ ಮೀಸಲಿಡಿ ಎಂದು ವ್ಯಂಗ್ಯವಾಡಿದರು. ಅತ್ತ, ಪರಿಷತ್ನಲ್ಲಿ ಮಾತನಾಡಿದ ಆಯನೂರು ಮಂಜುನಾಥ್ ಅವರು ಸಿದ್ದರಾಮಯ್ಯ ಬಜೆಟ್ನ ಎಲ್ಲಾ ಯೋಜನೆಗಳನ್ನು ಮುಂದುವರಿಸಿದ್ದೇವೆ ಅಂತ ಸಿಎಂ ಹೇಳುತ್ತಿದ್ದಾರೆ. ಅದ್ಯಾವ ಯೋಜನೆಗಳು ಅಂತ ವಿವರಿಸುತ್ತೀರಾ ಎಂದು ಪ್ರಶ್ನಿಸಿದರು.