ಬಾಗಲಕೋಟೆ: ಬೀದಿಯಲ್ಲಿ ಬಿದ್ದ ಸಿದ್ದರಾಮಯ್ಯರನ್ನು ಬಾದಾಮಿಗೆ ಕರೆದುಕೊಂಡು ಬಂದವರು ಯಾರು? ನಾನು ತಾನೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಸೇರ್ಪಡೆಗೊಳ್ಳುವವರ ಹೆಸರು ಈಗಲೇ ಹೇಳುವುದಕ್ಕೆ ಆಗುವುದಿಲ್ಲ. ತಾಳಿ ಕಟ್ಟದೇ ಹೆಂಡತಿ ಅಂತ ಹೇಳುವುದಕ್ಕೆ ಆಗುವುದಿಲ್ಲ. ಆದರೆ ಪ್ರಮುಖರು ಜೆಡಿಎಸ್ ಸೇರಲಿದ್ದಾರೆ. ಕಾಂಗ್ರೆಸ್ನವರು ನಮ್ಮ ಪಕ್ಷದವರು ಬೇಕಾದರೆ ಹೇಳಲಿ. ನಾವೇ ಲಿಸ್ಟ್ ಕೊಡುತ್ತೇವೆ ಎಂದಿದ್ದಾರೆ.
ರಾಜ್ಯಸಭಾ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಜುಲೈ 30 ರೊಳಗೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಮುಕ್ತಾಯ ಮಾಡುತ್ತೇವೆ. ಭಾರತದ ಇತಿಹಾಸದಲ್ಲೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕ ಬಿಜೆಪಿಗೆ ಮೊದಲ ಪ್ರಾಶಸ್ತ್ಯದ ಮತ ಹಾಕಿಸಿದ್ದು ಎಂದು ನೋಡಿಲ್ಲ. ಈ ಬಗ್ಗೆ ಸೋನಿಯಾ ಗಾಂಧಿಗೆ ಪತ್ರ ಬರೆದರೂ ರಿಪ್ಲೈ ಇಲ್ಲ. ಈ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಎಲ್ಲೂ ಉತ್ತರ ಕೊಡುತ್ತಿಲ್ಲ. ಹಾಗಾದರೆ ಬಿಜೆಪಿಯ ಬಿ ಟೀಮ್ ಜೆಡಿಎಸ್ಸಾ ಅಥವಾ ಕಾಂಗ್ರೆಸ್ಸಾ ಅಂತ ಜನ ತೀರ್ಮಾನ ಮಾಡುತ್ತಾರೆ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ನಾಳೆ ‘ಡಿಯರ್ ವಿಕ್ರಮ್’ ಸಿನಿಮಾ ನೋಡಲಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ
ಜೆಡಿಎಸ್ ರಾಷ್ಟ್ರೀಯ ಪಕ್ಷವಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಾದಾಮಿಯಿಂದ ಸಿದ್ದರಾಮಯ್ಯ ಹೇಗೆ ಎಂಎಲ್ಎ ಆದರು. ಬೀದಿಯಲ್ಲಿ ಬಿದ್ದ ಸಿದ್ದರಾಮಯ್ಯರನ್ನು ಬಾದಾಮಿಗೆ ಕರೆದುಕೊಂಡು ಬಂದವರು ಯಾರು? ನಾನು ತಾನೆ? ಬಿಬಿ ಚಿಮ್ಮನಕಟ್ಟಿ ನನ್ನ ಜೊತೆ ಮಂತ್ರಿಯಾಗಿದ್ದಂತವರು. ಚಿಮ್ಮನಕಟ್ಟಿ ಅವರನ್ನು ನಾನು ಒಪ್ಪಿಸಿ ಸಿದ್ದರಾಮಯ್ಯನವರನ್ನು ಬಾದಾಮಿಯಲ್ಲಿ ನಿಲ್ಲಿಸಿದೆವು. ವೈಎಸ್ಆರ್, ಜಗನ್, ಸ್ಟಾಲಿನ್ ರಾಷ್ಟ್ರೀಯ ಪಕ್ಷವಲ್ಲ. ಅವರು ಸಿಎಂ ಆಗಿಲ್ವಾ? ಹಾಗೇ ನಾವು ಮುಂದಿನ ದಿನದಲ್ಲಿ ಆಡಳಿತಕ್ಕೆ ಬರುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯನವರನ್ನು ಬಾದಾಮಿಗೆ ಕರೆತರುವಾಗ ಎಸ್.ಆರ್.ಪಾಟೀಲ್ ಮತ್ತು ಗಿಡ್ಡ ತಿಮ್ಮಾಪುರ ಇಬ್ಬರಿಗೂ ಬೆಂಬಲ ನೀಡುವಂತೆ ನಾನೇ ಹೇಳಿದ್ದೆ. ಸಿದ್ದರಾಮಯ್ಯ ಬಂದರೆ 20 ಸ್ಥಾನ ಜಾಸ್ತಿ ಬರುತ್ತವೆ ಬನ್ನಿ ಅಂದಿದ್ದೆ. ಆದರೆ ಸಿದ್ದರಾಮಯ್ಯ ಬಾದಾಮಿಗೆ ಬಂದ ಮೇಲೆ 20 ಸೀಟ್ ಕಡಿಮೆಯಾಯಿತು ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಮಲಯಾಳಂ ನಟಿ ಅಂಬಿಕಾ ರಾವ್ ನಿಧನ
ಎಸ್.ಆರ್.ಪಾಟಿಲ್ ಜೆಡಿಎಸ್ಗೆ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಯಾರ ಮೇಲೂ ಒತ್ತಡ ಹಾಕಲ್ಲ. ನಾವು ಯಾವತ್ತೂ ಆರೇಂಜ್ ಮ್ಯಾರೇಜ್ ಮಾಡುವವರು. ಕಿಡ್ನಾಪ್ ಮಾಡಿ ಲವ್ ಮ್ಯಾರೇಜ್ ಮಾಡುವವರಲ್ಲ. ಲವ್ ಮ್ಯಾರೇಜ್ನಲ್ಲಿ ನಮಗೆ ವಿಶ್ವಾಸವಿಲ್ಲ. ಹಾಗಾಗಿ ನಾವು ಯಾರೇ ಬಿಜೆಪಿ ಕಾಂಗ್ರೆಸ್ನವರನ್ನು ಬನ್ನಿ ಅಂತ ಹೇಳುವುದಿಲ್ಲ. ಸಜ್ಜನರು ಅವರಾಗಿಯೇ ಬರುತ್ತಾರೆ. ದೆಹಲಿಯಲ್ಲಿ ನಮಗೆ ಯಾರು ತಂದೆ ತಾಯಿಗಳಿಲ್ಲ. ನಮಗೆ ಮಾಧ್ಯಮದವರೇ ತಂದೆ, ತಾಯಿಗಳು. ನಮ್ಮ ಬಳಿ ದುಡ್ಡಿಲ್ಲ, ನಮಗೆ ಮಾಧ್ಯಮದವರೇ ಆಸರೆ. ನಮ್ಮ ಮಾನಾಪಮಾನ ನಿಮ್ಮದಯ್ಯ. ಸರ್ವಸ್ವವೂ ನಿಮ್ಮ ಪಾದಕ್ಕೆರೆದು. ಜಂಗಮರ ತರಹ ಹೊರಟಿದ್ದೇವೆ. ಎಲ್ಲೆಲ್ಲಿ ಭಿಕ್ಷೆ ಸಿಗುತ್ತದೆಯೋ ಅಲ್ಲಿ ಕೇಳುತ್ತೇವೆ ಎಂದಿದ್ದಾರೆ.