ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರಿಗೆ ನಡುರಸ್ತೆಯಲ್ಲೇ ಬೇರೊಂದು ಗುಂಪು ಚಾಕು ಇರಿದ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ನಗರಸಭೆ ಹಿಂಭಾಗದ ಬಾರ್ ಬಳಿ ನಡೆದಿದೆ.
ಸುನೀಲ್, ಮಹೇಶ್ ಇಬ್ಬರು ಹಲ್ಲೆಗೊಳಗಾದ ಯುವಕರು. ಮೂರ್ತಿ ಹಾಗೂ ಆತನ ಸ್ನೇಹಿತ ಮಹೇಶ್ ಎಂಬಾತ ಚಾಕುವಿನಿಂದ ಹಲ್ಲೆ ಮಾಡಿದ್ದು, ತಮ್ಮನ ಮೇಲೆ ಜಗಳ ಮಾಡಿದ ಕೋಪದ ಹಿನ್ನೆಲೆಯಲ್ಲಿ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಹಲ್ಲೆಗೊಳಗಾದ ಸುನೀಲ್ ಹಾಗೂ ಮಹೇಶ್ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏನಿದು ಘಟನೆ? ಮೂರ್ತಿಯ ಸಹೋದರನಾದ ದೇವ ಮೇಲೆ ಕಳೆದ 2 ದಿನಗಳ ಹಿಂದೆ ಬೈಕ್ ಪಾರ್ಕಿಂಗ್ ವಿಚಾರದಲ್ಲಿ ಸುನೀಲ್ ಹಾಗೂ ಮಹೇಶ್ ಎಂಬುವವರು ಗಲಾಟೆ ನಡೆಸಿದ್ದರು. ಹೀಗಾಗಿ ತನ್ನ ಸಹೋದರನ ಮೇಲೆ ಗಲಾಟೆ ನಡೆಸಿದ ಕಾರಣಕ್ಕೆ ಸುನೀಲ್ ಹಾಗೂ ಮಹೇಶ್ಗೆ ಕರೆ ಮಾಡಿದ್ದ ಮೂರ್ತಿ ಇಂದು ಬಾರ್ ಬಳಿ ತನ್ನ ಮತ್ತೊಬ್ಬ ಸ್ನೇಹಿತ ಮಹೇಶ್ ಜೊತೆ ಸೇರಿ ಜಗಳ ನಡೆಸಿದ್ದ.
ಈ ವೇಳೆ ಏಕಾಏಕಿ ಚಾಕುವಿನಿಂದ ಸುನೀಲ್ ಹಾಗೂ ಮಹೇಶ್ ಮೇಲೆ ದಾಳಿ ನಡೆಸಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವೇಳೆ ಗಾಯಗೊಂಡಿದ್ದ ಸುನೀಲ್, ಮಹೇಶ್ ಇಬ್ಬರು ಸೇರಿ ಮೂರ್ತಿ ಜೊತೆ ಬಂದಿದ್ದ ಆತನ ಸ್ನೇಹಿತ ಮಹೇಶ್ ನನ್ನ ಹಿಡಿದುಕೊಂಡಿದ್ದಾರೆ. ಈ ವೇಳೆ ಆತನ ಕೈಗೂ ಚಾಕುವಿನ ಸಣ್ಣ-ಪುಟ್ಟ ಗಾಯಗಳಾಗಿದ್ದು, ಮೂವರು ರಕ್ತದ ಮಡುವಿನಲ್ಲಿ ನಡುರಸ್ತೆಯಲ್ಲೇ ಒದ್ದಾಟ ನಡೆಸಿದ್ದಾರೆ. ಈ ಘಟನೆ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಆರೋಪಿಗಳಾದ ಮಹೇಶ್ ನನ್ನು ಚಿಂತಾಮಣಿ ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv