ಬೆಳಗಾವಿ: ಮಕ್ಕಳ ಮುದ್ದಿನ ಬೆಕ್ಕನ್ನು ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮೂರಂತಸ್ತಿನ ಕಟ್ಟಡದ ಬಾಲ್ಕನಿಯಲ್ಲಿ ಸಿಲುಕಿ ನೇತಾಡುತ್ತಿದ್ದ ಮಕ್ಕಳ ಮುದ್ದಿನ ಬೆಕ್ಕನ್ನು ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಸತತ ಎರಡು ಘಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಈ ಹಿನ್ನೆಲೆ ಮಕ್ಕಳು ಸೇರಿ ಸ್ಥಳೀಯರು ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಟ್ರಿಪ್ಗೆ ಕೈಕೊಟ್ಟ ಪತ್ನಿ- ಪಿಲ್ಲೊ ಜೊತೆ ಹೊರಟ ಪತಿ
ನಡೆದಿದ್ದೇನು?
ಬೆಳಗಾವಿಯ ಖಡೇಬಜಾರ್ ರಸ್ತೆಯಲ್ಲಿರುವ ಮೂರಂತಸ್ತಿನ ಕಟ್ಟಡದ ಬಾಲ್ಕನಿಯಲ್ಲಿ ಬೆಕ್ಕು ಸಿಲುಕಿಕೊಂಡಿತ್ತು. ಶನಿವಾರ ರಾತ್ರಿ ಕಟ್ಟಡದ ಮೂರಂತಸ್ತಿನ ತುದಿಗೆ ಇಳಿದಿದ್ದ ಬೆಕ್ಕು ಮರಳಿ ಬಾಲ್ಕನಿ ಕಿಟಕಿಗೆ ನೆಗೆಯಲಾಗದೇ ಪ್ರಾಣಭಯದಲ್ಲಿ ಪರದಾಡುತ್ತಿತ್ತು. ಸುಮಾರು ಎರಡು ಗಂಟೆಗಳ ಕಾಲ ಮ್ಯಾಂವ್… ಮ್ಯಾಂವ್… ಎಂದು ಗುಡುತ್ತ ಅತ್ತಿಂದಿತ್ತ, ಇತ್ತಿಂದತ್ತ ಸುಳಿದಾಡುತ್ತಿತ್ತು.
ಈ ವೇಳೆ ಬೆಕ್ಕನ್ನು ರಕ್ಷಿಸುವಂತೆ ಪಾಲಕರ ಬಳಿ ಮಕ್ಕಳು ಹಠ ಹಿಡಿದಿದ್ದರು. ಈ ವೇಳೆ ಪೋಷಕರು ಬೆಕ್ಕನ್ನು ರಕ್ಷಣೆ ಮಾಡಲು ಹರಸಾಹಸಪಟ್ಟಿದ್ದಾರೆ. ಆದ್ರೆ, ಅದು ಅವರಿಗೆ ಸಾಧ್ಯವಾಗದೇ ಇದ್ದಾಗ ಅನಿಮಲ್ ವೆಲ್ಪೇರ್ ಅಸೋಸಿಯೇಷನ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅನಿಮಲ್ ವೆಲ್ಪೇರ್ ಅಸೋಸಿಯೇಷನ್ ವರುಣ್ ಕರ್ಕನೀಸ್ ತಂಡದವರ ಪ್ರಯತ್ನ ಫಲ ನೀಡಿಲ್ಲ. ಇದನ್ನೂ ಓದಿ: ಜಮೀರ್ ಅಹ್ಮದ್ ಖಾನ್ ನಮ್ಮ ಪಕ್ಷದ ಬಾಹುಬಲಿ: ಸತೀಶ್ ಜಾರಕಿಹೊಳಿ
ಬಳಿಕ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ವಾಹನದ ಏಣಿ ಸಹಾಯದಿಂದ ಬಾಲ್ಕನಿ ಏರಿ ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ. ಇತ್ತ ಬೆಕ್ಕನ್ನು ರಕ್ಷಣೆ ಮಾಡಿದ ದೃಶ್ಯವನ್ನು ನೋಡಿ ಸುತ್ತ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ, ಕೂಗಾಡಿ ಖುಷಿಪಟ್ಟರು.