ವಿಜಯಪುರ: ಗಂಡ -ಹೆಂಡತಿ ಜಗಳದಲ್ಲಿ ಶಿಶುವೊಂದು ಬಲಿಯಾದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುನಕುಂಟಿ ಗ್ರಾಮದಲ್ಲಿ ನಡೆದಿದೆ.
ಹುನಕುಂಟಿ ಗ್ರಾಮದ ನಿವಾಸಿಯಾದ ಬಸನಗೌಡಾ ಎಂಬಾತ ತನ್ನ ಪತ್ನಿಯ ಜೊತೆ ಜಗಳವಾಡುತ್ತಿದ್ದನು. ಈ ವೇಳೆ ಕೋಪಗೊಂಡ ಬಸನಗೌಡ ಪತ್ನಿಯತ್ತ ಕಲ್ಲು ಬೀಸಿದ್ದಾನೆ. ಆದರೆ ಅದು ಪತ್ನಿಗೆ ಬಿಟ್ಟು ಮನೆಯ ಎದುರುಗಡೆ ಬಟ್ಟೆ ಜೋಡಿಸುತ್ತಿದ್ದ ತುಂಬು ಗರ್ಭಿಣಿ ರೇಣುಕಾ ಹೊಟ್ಟೆಗೆ ತಗುಲಿದೆ.
ಗರ್ಭಿಣಿ ಹೊಟ್ಟೆಗೆ ಕಲ್ಲು ತಾಗುತ್ತಿದ್ದಂತೆ, ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಕುಟುಂಬಸ್ಥರು ರೇಣುಕಾಳನ್ನ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಭಾನುವಾರ ರೇಣುಕಾಗೆ ಹೆರಿಗೆ ಆಗಿದ್ದು, ಶಿಶು ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಆರೋಪಿ ಬಸನಗೌಡಾ ವಿರುದ್ಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆರೋಪಿ ಬಸನಗೌಡಾ ಪರಾರಿಯಾಗಿದ್ದು, ಆತನ ಸೆರೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv