ಚಿಕ್ಕಬಳ್ಳಾಪುರ: ಭಾರತ ಲಾಕ್ಡೌನ್ ಹಿನ್ನೆಲೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ವಿಶ್ವವಿಖ್ಯಾತ ನಂದಿಗಿರಿಧಾಮ ಸಂಪೂರ್ಣ ಬಂದ್ ಆಗಿದ್ದು, ನಂದಿಗಿರಿಧಾಮದಲ್ಲಿನ ಮೂಕ ಪ್ರಾಣಿಗಳ ರೋದನೆ ಮನಕಲಕುವಂತಿದೆ.
ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಆ ಪ್ರವಾಸಿ ತಾಣವನ್ನು ಬಂದ್ ಮಾಡಿದ ಹಿನ್ನೆಲೆ, ಅಲ್ಲಿರುವ ಸಾವಿರಾರು ಕೋತಿಗಳು ಅನ್ನ, ಆಹಾರ, ಹಣ್ಣು ಹಂಪಲು ಹಾಗೂ ನೀರು ಇಲ್ಲದೆ ಪ್ರಾಣ ಕೈಯಲ್ಲಿಡಿದು ನಿತ್ರಾಣವಾಗಿ ಉಸಿರಾಡುತ್ತಿವೆ. ಸದಾ ಮರದಿಂದ ಮರಕ್ಕೆ ಜಿಗಿಯುತ್ತಾ ಕಪಿಚೇಷ್ಠೆ ಮಾಡುತ್ತಿದ್ದ ಕೋತಿಗಳು ಈಗ ನಡೆದಾಡಲು ಕಷ್ಟಪಡುತ್ತಿದ್ದವೆ.
- Advertisement 2
- Advertisement 3
ಬೆಂಗಳೂರಿಗರ ಹಾಟ್ ಫೇವರೆಟ್ ಪಿಕ್ನಿಕ್ ಸ್ಪಾಟ್ ಆಗಿದ್ದ ನಂದಿ ಹಿಲ್ಸ್ ಈಗ ಬಿಕೋ ಎನ್ನುತ್ತಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕಳೆದ ಒಂದು ತಿಂಗಳಿಂದ ನಂದಿಗಿರಿಧಾಮಕ್ಕೆ ಬೀಗ ಹಾಕಿ ಪ್ರವಾಸಿಗರ ಪ್ರವೇಶ ನಿರ್ಬಂಧ ಮಾಡಿದೆ. ಇದರ ನೇರ ಪರಿಣಾಮ ಗಿರಿಧಾಮದಲ್ಲಿದ್ದ ವಾನರ ಸೈನ್ಯದ ಮೇಲೆ ಬಿದ್ದಿದ್ದು, ಗಿರಿಧಾಮದ ಮೇಲೆ ಇರುವ ಕೋತಿಗಳಿಗೆ ಅನ್ನ ಆಹಾರ, ಹಣ್ಣು, ಹಂಪಲು, ನೀರು ಇಲ್ಲದೆ ಪ್ರಾಣ ಕೈಯಲ್ಲಿಡಿದು ನಿತ್ರಾಣಗೊಂಡಿವೆ.
- Advertisement 4
ಹತ್ತಾರು ವರ್ಷಗಳಿಂದಲೂ ಗಿರಿಧಾಮವನ್ನೇ ತಮ್ಮ ಆವಾಸ ಸ್ಥಾನ ಮಾಡಿಕೊಂಡಿರುವ ಸಾವಿರಾರು ಕೋತಿಗಳು, ಈಗ ಇದ್ದಕ್ಕಿದ್ದ ಹಾಗೆ ಕೆಳಗೆ ಬರಲಾಗದೆ ಮೇಲೆಯೂ ಇರಲಾರದೆ ಗಿರಿಧಾಮದಲ್ಲಿ ಸಿಗುವ ಹುಲ್ಲನ್ನೆ ತಿಂದು ಉಸಿರಾಡುವಂತಾಗಿವೆ. ಇನ್ನೂ ಒಂದಷ್ಟು ಕೋತಿಗಳು, ಗಿರಿಧಾಮದ ಅಕ್ಕ ಪಕ್ಕ ಇರುವ ಹಳ್ಳಿಗಳತ್ತಾ ವಲಸೆ ಹೋಗಿವೆ. ಕೋತಿಗಳ ಹಸಿವು ಸಂಕಷ್ಟ ನೋಡಲಾಗದೆ ಕೆಲವು ಸ್ಥಳೀಯ ಗ್ರಾಮಸ್ಥರು ತಮ್ಮ ಗ್ರಾಮಗಳ ಬಳಿ ಬಂದ ಕೋತಿಗಳಿಗೆ, ತರಕಾರಿ ಹಾಕಿ ಮಾನವೀಯತೆ ಮೆರೆಯುತ್ತಿದ್ದಾರೆ.
ಆದರೆ ಪ್ರತಿದಿನ ಹಾಕಲು ಸಾಧ್ಯವಾಗುತ್ತಿಲ್ಲ. ಗಿರಿಧಾಮಕ್ಕೆ ಬರುವ ಕಲರ್ ಫುಲ್ ಪ್ರೇಮಿಗಳಿಗೆ ತರ್ಲೆ ತಮಾಷೆ ಮಾಡುತ್ತಾ, ಅವರಿಗೆ ಉಚಿತ ಮನರಂಜನೆ ನೀಡಿ ಅವರ ಕೈಯಲ್ಲಿದ್ದ ತಿಂಡಿ ತಿನಿಸು ಕಸಿದು ತಿನ್ನುತ್ತಿದ್ದ ಕೋತಿಗಳು, ಈಗ ಅನ್ನ-ನೀರು ಇಲ್ಲದೆ ಕೊನೆಗೆ ಹುಲ್ಲನ್ನು ತಿಂದು ಪ್ರಾಣ ಉಳಿಸಿಕೊಳ್ಳುತ್ತಿರುವ ದೃಶ್ಯ ನೋಡಿದರೆ ಕರಳು ಕಿತ್ತುಬರುತ್ತೆ. ಗಿರಿಧಾಮದಲ್ಲಿರುವ ಕೋತಿಗಳಿಗೆ ಯಾರಾದರೂ ಹಣ್ಣು-ಹಂಪಲು ತರಕಾರಿ ಹಾಕಿ ಅವುಗಳು ಬದುಕುಳಿಯಲು ಸಹಾಯ ಮಾಡಬೇಕಿದೆ.