ಕಲಬುರಗಿ/ಗದಗ: ಯುಗಾದಿ ಹಬ್ಬದಂದೇ ಕಲಬುರಗಿಯ ಶಿವಲಿಂಗೇಶ್ವರ ಜಾತ್ರೆಯ ರಥೋತ್ಸವದಲ್ಲಿ ಘನಘೋರ ದುರಂತ ಸಂಭವಿಸಿದೆ. ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಇಲ್ಲಿನ ಶಹಬಾದ್ ತಾಲೂಕಿನ ದೇವನ ತೇಗನೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕಿಶನ್ ಮೃತ ದುರ್ದೈವಿಯಾಗಿದ್ದು, ಇವರು ಶಹಬಾದ್ ತಾಲೂಕಿನ ತರಿ ತಾಂಡಾದ ನಿವಾಸಿ ಎಂದು ತಿಳಿದುಬಂದಿದೆ. ಯುಗಾದಿ ಹಬ್ಬದಂದು ಪ್ರತಿವರ್ಷ ಶಿವಲಿಂಗೇಶ್ವರ ರಥೋತ್ಸವ ನಡೆಯುತ್ತೆ. ಈ ಜಾತ್ರೆಯಲ್ಲಿ ಅವಘಡ ಸಂಭವಿಸಿದ್ದು, ಕಿಶನ್ ಮೃತಪಟ್ಟಿದ್ದಾರೆ.
ಅತ್ತ ಗದಗ ಜಿಲ್ಲೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ರಥವನ್ನು ಎಳೆಯುವ ವೇಳೆ ನೂಕುನುಗ್ಗಲಿನಿಂದಾಗಿ ರಥದ ಗಾಲಿಗೆ ಭಕ್ತರೊಬ್ಬರು ಸಿಲುಕಿ ಕಾಲು ಕಳೆದುಕೊಂಡಿರುವ ಘಟನೆ ನಡೆದಿದೆ. ಗ್ರಾಮದ ಶ್ರೀ ಯಚ್ಚರೇಶ್ವರ ಜಾತ್ರೆಯ ರಥ ಎಳೆಯುವ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳೀಯರಾದ ಮುದಿಯಪ್ಪ ಬದಾಮಿ ಎಂಬ 48 ವರ್ಷದ ವ್ಯಕ್ತಿಯ ಎರಡೂ ಕಾಲಗಳ ಮೇಲೆ ರಥದ ಗಾಲಿ ಹರಿದಿದೆ. ಪರಿಣಾಮ ಮುದಿಯಪ್ಪ ಅವರ ಎರಡೂ ಕಾಲುಗಳು ನುಜ್ಜುಗುಜ್ಜಾಗಿದ್ದು, ಗಾಯಾಳುವನ್ನ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗದಗ ಜಿಲ್ಲೆಯ ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದರಿಂದ ಭಕ್ತರು ಸಾಕಷ್ಟು ಆತಂಕಕ್ಕಿಡಾಗಿದ್ದರು.