ಇಡಿ ಎಂಟ್ರಿಯಾಗುತ್ತಿದ್ದಂತೆ ಮಹಡಿಯಿಂದ ಬಿತ್ತು 500 ರೂ. ನೋಟುಗಳ ಮಳೆ!

2 Min Read

– ಪಂಜಾಬ್ ಸಿಎಂ ಆಪ್ತರ ಮೇಲೆ ಇಡಿ ದಾಳಿ
– ಸಾಕ್ಷ್ಯ ನಾಶಕ್ಕೆ ಹಣದ ಚೀಲವನ್ನೇ ಕೆಳಕ್ಕೆ ಎಸೆದ ಉದ್ಯಮಿ!

ಚಂಡೀಗಢ: ಪಂಜಾಬ್‌ನ ಮೊಹಾಲಿ ಜಿಲ್ಲೆಯ ಖರಾರ್‌ನಲ್ಲಿ ಜಾರಿ ನಿರ್ದೇಶನಾಲಯದ (ED) ದಾಳಿಯ ವೇಳೆ ಕಟ್ಟಡದ ಒಂಬತ್ತನೇ ಮಹಡಿಯಿಂದ 500 ರೂಪಾಯಿ ಮುಖಬೆಲೆಯ ನೋಟುಗಳಿದ್ದ ಹಣದ (Money) ಚೀಲಗಳನ್ನು ಹೊರಕ್ಕೆ ಎಸೆದ ಘಟನೆ ನಡೆದಿದೆ.

ಇಡಿ ಅಧಿಕಾರಿಗಳು ಖರಾರ್‌ನ ‘ವೆಸ್ಟರ್ನ್ ಟವರ್ಸ್’ ವಸತಿ ಸಮುಚ್ಚಯದ 9ನೇ ಮಹಡಿಯಲ್ಲಿರುವ ಫ್ಲಾಟ್ ನಂಬರ್ 906 ಕ್ಕೆ ತಲುಪುತ್ತಿದ್ದಂತೆ ಅಲ್ಲಿಂದ ಎರಡು ಹಣದ ಚೀಲಗಳನ್ನು ಕಿಟಕಿಯಿಂದ ಕೆಳಕ್ಕೆ ಎಸೆಯಲಾಗಿದೆ.

ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ ಮತ್ತು ಪ್ರಾಥಮಿಕ ವರದಿಗಳ ಪ್ರಕಾರ ಅಧಿಕಾರಿಗಳು ಚೀಲಗಳಿಂದ ಸುಮಾರು 21 ರಿಂದ 25 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಕೆಳಗೆ ಬಿದ್ದಿದ್ದ ಹಣವನ್ನು ತೆಗೆದುಕೊಂಡು ಓಡಿಹೋಗಲು ಯತ್ನಿಸಿದ ಬಿಳಿ ಕಾರಿನ ಚಾಲಕನನ್ನು ಇಡಿ ಅಧಿಕಾರಿಗಳು ಬೆನ್ನಟ್ಟಿ ಹಿಡಿದಿದ್ದಾರೆ.

ಈ ದಾಳಿಯು ಐಟಿ ಉದ್ಯಮಿ ಎನ್ನಲಾದ ನಿತಿನ್ ಗೋಹಲ್ ಎಂಬುವವರಿಗೆ ಸೇರಿದ ಸ್ಥಳದಲ್ಲಿ ನಡೆದಿದೆ. ನಿತಿನ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ವಿಶೇಷ ಕರ್ತವ್ಯಾಧಿಕಾರಿ (OSD) ರಾಜಬೀರ್ ಸಿಂಗ್ ಘುಮ್ಮನ್ ಅವರ ಆಪ್ತರೆಂದು ವಿರೋಧ ಪಕ್ಷದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಆರೋಪಿಸಿದ್ದಾರೆ.

ಗ್ರೇಟರ್ ಮೊಹಾಲಿ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ (GMADA) ವ್ಯಾಪ್ತಿಯಲ್ಲಿ ಭೂಬಳಕೆ ಬದಲಾವಣೆ (CLU) ಪರವಾನಗಿಗಳನ್ನು ಪಡೆಯುವಲ್ಲಿ ನಡೆದ ಅಕ್ರಮಗಳು ಮತ್ತು ಸನ್‌ಟೆಕ್ ಸಿಟಿ ಯೋಜನೆಯಲ್ಲಿನ ಹಣಕಾಸು ವಂಚನೆಗೆ ಸಂಬಂಧಿಸಿದಂತೆ ಇಡಿ ಈ ದಾಳಿ ನಡೆಸಿತ್ತು.

ಪಂಜಾಬ್ ಮತ್ತು ಚಂಡೀಗಢದಾದ್ಯಂತ ಒಟ್ಟು 12 ಸ್ಥಳಗಳಲ್ಲಿ ನಡೆದ ಬೃಹತ್ ಕಾರ್ಯಾಚರಣೆಯ ಭಾಗವಾಗಿ ಈ ದಾಳಿ ನಡೆದಿದೆ. ಬಿಲ್ಡರ್‌ಗಳು ಮತ್ತು ರಿಯಲ್ ಎಸ್ಟೇಟ್ ಕಂಪನಿಗಳಾದ ಎಬಿಎಸ್ ಟೌನ್‌ಶಿಪ್ ಮತ್ತು ಅಲ್ಟಸ್ ಬಿಲ್ಡರ್ಸ್‌ಗಳ ಮೇಲೆ ಕೂಡ ತನಿಖೆ ನಡೆಯುತ್ತಿದೆ. ದಾಳಿಗಳು ಆಮ್ ಆದ್ಮಿ ಪಕ್ಷಕ್ಕೆ (AAP) ನಿಕಟವಾಗಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ನಡೆಯುತ್ತಿವೆ ಎಂದು ವರದಿಯಾಗಿದೆ.

Share This Article