ಚಿಕ್ಕಬಳ್ಳಾಪುರ: ತಾಲೂಕಿನ ಬಾರ್ಲಹಳ್ಳಿ ಗ್ರಾಮದ ಶ್ರೀ ಜಾಲಾರಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಕಳ್ಳರ ಕಾಟ ಎದುರಾಗಿದೆ. ದೇವಾಲಯದಲ್ಲಿ ಸತತ ನಾಲ್ಕನೇ ಬಾರಿ ಕಳ್ಳರು ದೇವಾಲಯದ ಹುಂಡಿ ಒಡೆದು ಹಣ ಕದ್ದು ಪರಾರಿಯಾಗಿದ್ದಾರೆ.
ಜನ ತಮ್ಮ ಕಷ್ಟಗಳನ್ನ ದೇವರು ಪರಿಹರಿಸುತ್ತಾರೆ ಎಂದು ದೇವಾಲಯಕ್ಕೆ ಹೋಗ್ತಾರೆ, ಭಕ್ತಿ ಭಾವದಿಂದ ಪೂಜೆ ಪುನಸ್ಕಾರ ಮಾಡಿ, ದೇವರಿಗೆ ಹರಕೆ ಹೊತ್ತು ಹುಂಡಿಗೆ ಕಾಣಿಕೆ ಹಾಕುತ್ತಾರೆ. ಆದ್ರೆ ಭಕ್ತರ ಕಷ್ಟಗಳನ್ನು ಪರಿಹರಿಸುವ ಆ ಭಗವಂತನಿಗೆ ಕಷ್ಟಗಳು ಬಂದೊದಗಿದೆ. ಶ್ರೀ ಜಾಲಾರಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಮೇಲೆ ನಿರಂತರ ಕಳ್ಳರು ದಾಳಿಮಾಡುತ್ತಿದ್ದು, ಭಕ್ತರನ್ನು ಕಾಪಾಡುವ ದೇವರಿಗೆ ರಕ್ಷಣೆ ಇಲ್ಲದಂತಾಗಿದೆ. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಅಗಲಿ 9ನೇ ತಿಂಗಳು: ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬ
ಚಿಕ್ಕಬಳ್ಳಾಪುರ ತಾಲೂಕಿನ ಬಾರ್ಲಹಳ್ಳಿ ಬಳಿಯ ಕಾಡಂಚಿನ ಬೆಟ್ಟದಲ್ಲಿ ನೆಲಸಿರುವ ಶ್ರೀ ಯೋಗ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಭಕ್ತರು ಭೇಟಿ ನೀಡಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿಕೊಂಡು ಹುಂಡಿಗೆ ಹಣ ಹಾಕ್ತಿದ್ದಾರೆ. ಆದ್ರೆ ಈ ದೇವಾಲಯವನ್ನೇ ಟಾರ್ಗೆಟ್ ಮಾಡಿರುವ ಖದೀಮರು ಒಂದಲ್ಲ ಎರಡಲ್ಲ ಸತತ 4 ಬಾರಿ ದೇವಾಲಯಕ್ಕೆ ನುಗ್ಗಿ ಹುಂಡಿ ಒಡೆದು ಹುಂಡಿಯಲ್ಲಿದ್ದ ಹಣ ಹಾಗೂ ದೇವರ ಒಡವೆಗಳನ್ನು ಕದ್ದೊಯ್ದಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಪ್ರತಿಷ್ಠಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಪತ್ತೆ!
ಈ ಹಿಂದೆಯೂ ಸಹ ಮೂರು ಬಾರಿ ಕಳ್ಳತನ ಆಗಿ ಲಕ್ಷಾಂತರ ರೂಪಾಯಿ ಭಕ್ತರ ಕಾಣಿಕೆ ಹಣ ಕಳ್ಳರ ಪಾಲಾಗಿತ್ತು. ಪ್ರತಿ ಬಾರಿ ಕಳ್ಳರು ಕನ್ನ ಹಾಕಿದಾಗಲೂ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲಾಗಿದೆ. ಈಗ ಇದು 4ನೇ ಬಾರಿ ದೇವಾಲಯದಲ್ಲಿ ಕಳ್ಳತನ ಆಗಿದ್ದು ಹುಂಡಿ ಒಡೆದು ಹಣ ದೋಚಿದ್ದು ಭಕ್ತರ ಬೇಸರಕ್ಕೆ ಕಾರಣವಾಗಿದೆ. ದೇವಾಲಯದ ಅಭಿವೃದ್ದಿಗೆಂದು ಜನ ದೇವರ ಕಾರ್ಯಗಳಿಗೆ ಉಪಯೋಗವಾಗಲಿ ಎಂದು ಭಕ್ತರು ಹುಂಡಿಗೆ ಹಣ ಹಾಕಿದ್ರೆ ಇದು ಕಳ್ಳರ ಪಾಲಾಗುತ್ತಿದೆ. ಹೀಗಾಗಿ ಮುಜರಾಯಿ ಇಲಾಖೆ ಚಿಕ್ಕಬಳ್ಳಾಪುರ ತಾಲೂಕು ಆಡಳಿತ ಸುಪರ್ದಿಯ ದೇವಾಲಯದಲ್ಲಿ ಸಿಸಿಟಿವಿ ಅಳವಡಿಕೆ ಮಾಡುವುದರ ಜೊತೆಗೆ ಸೂಕ್ತ ರಕ್ಷಣಾ ಬಂದೋಬಸ್ತ್ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಭಕ್ತರು ಆಗ್ರಹಿಸಿದ್ದಾರೆ.