ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಬಳಿ ಚಿರತೆ (Leopard) ದಾಳಿ ನಡೆಸಿದ್ದು ಆಕಳ ಕರು (Calf) ಬಲಿಯಾಗಿದೆ. ಜಮೀನಿನಲ್ಲಿ ಕಟ್ಟಿ ಹಾಕಿದ್ದ ಎರಡು ವರ್ಷದ ಆಕಳ ಕರು ಚಿರತೆ ದಾಳಿಗೆ ಒಳಗಾಗಿದೆ.
ಜಾಲಹಳ್ಳಿಯ ಮುದ್ದರಂಗಪ್ಪ ತೆಗ್ಗಳ್ಳಿ ಎಂಬುವವರ ಜಮೀನಿನಲ್ಲಿ ಚಿರತೆ ದಾಳಿ ನಡೆದಿದ್ದು, ಪಕ್ಕದಲ್ಲೇ ಕಟ್ಟಿದ್ದ ಒಂದು ಆಕಳು ಬಚಾವ್ ಆಗಿದೆ. ಇದನ್ನೂ ಓದಿ: ನೌಕಾಪಡೆಗೆ ಎಂಹೆಚ್ 60ಆರ್ ಸೀಹಾಕ್ ಹೆಲಿಕಾಪ್ಟರ್ ನಿಯೋಜನೆಗೆ ಸಿದ್ಧತೆ – ಭಾರತಕ್ಕೆ ಭೀಮ ಬಲ
ಘಟನೆ ಹಿನ್ನೆಲೆ ಅರಣ್ಯ ಇಲಾಖೆ (Forest Department) ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಚಿರತೆ ಓಡಾಡಿದ ಹೆಜ್ಜೆ ಗುರುತು ಪತ್ತೆಯಾಗಿವೆ. ಕರು ಮೇಲೆ ದಾಳಿ ನಡೆದಿರುವ ರೀತಿಯ ಆಧಾರದ ಮೇಲೆ ಚಿರತೆಯೇ ದಾಳಿ ಮಾಡಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ. ಚಿರತೆ ದಾಳಿಯಿಂದ ಜಾಲಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ ಜನ ಭಯಭೀತರಾಗಿದ್ದಾರೆ.
ಜಿಲ್ಲೆಯ ಮಾನ್ವಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಒಂದೆರಡು ವರ್ಷಗಳಿಂದ ಚಿರತೆ ಭಯ ಹೆಚ್ಚಾಗಿ ಕಾಡುತ್ತಿದ್ದು ಈಗ ದೇವದುರ್ಗ ತಾಲೂಕಿನಲ್ಲೂ ಚಿರತೆ ದಾಳಿ ನಡೆದಿದ್ದು ಜನರ ಆತಂಕ ಹೆಚ್ಚಿಸಿದೆ. ಇಲ್ಲಿನ ಬೆಟ್ಟ ಗುಡ್ಡಗಳಲ್ಲಿ ಗುಹೆಗಳು ಹೆಚ್ಚಾಗಿ ಇರುವುದರಿಂದ ಚಿರತೆಗಳಿಗೆ ನೆಚ್ಚಿನ ತಾಣಗಳಾಗುತ್ತಿವೆ. ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತು ಅಗತ್ಯ ಕ್ರಮ ಕೈಗೊಳ್ಳಬೇಕು ಅಂತ ಸಾರ್ವಜನಿಕರು ಆಗ್ರಹಿಸಿದ್ದಾರೆ.