ಬೆಂಗಳೂರು: ಸಚಿವ ಎಸ್.ಟಿ ಸೋಮಶೇಖರ್ ಪುತ್ರ ನಿಶಾಂತ್ ಅವರಿಗೆ ನಕಲಿ ಅಶ್ಲೀಲ ವೀಡಿಯೋ ಬಿಡುಗಡೆಗೊಳಿಸುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಎಸ್.ಟಿ. ಸೋಮಶೇಖರ್ ಪುತ್ರ ನಿಶಾಂತ್ ಅವರಿಗೆ ಮಹಿಳೆಯೊಂದಿಗಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯದಲ್ಲಿ ಹರಿಬಿಡುವುದಾಗಿ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಖ್ಯಾತ ಜ್ಯೋತಿಷಿಯ ಪುತ್ರ ರಾಹುಲ್ ಭಟ್ (22) ನನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅಲ್ಲದೆ ಕೋರ್ಟ್ ಮುಂದೆ ಹಾಜರುಪಡಿಸಿ, ಇದೀಗ ಹೆಚ್ಚಿನ ತನಿಖೆಗಾಗಿ 5 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಪ್ರಕರಣ ಹಿಂದೆ ಕಾಂಗ್ರೆಸ್ ಶಾಸಕರ ಪುತ್ರಿಯ ಹೆಸರು ಪ್ರಸ್ತಾಪವಾಗುತ್ತಿದ್ದು, ಇನ್ನೂ ನಾಲ್ಕು ಮಂದಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಶಾಸಕರ ಪುತ್ರಿ ವಿದ್ಯಾಭ್ಯಾಸಕ್ಕಾಗಿ ಲಂಡನ್ಗೆ ಹೋಗಿದ್ದು, ಯುಕೆ ಮೂಲದ ಇಂಟರ್ನೆಟ್ ನಂಬರ್ ಬಳಸಿ ವೀಡಿಯೋ ಕಳುಹಿಸಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಮತ್ತು ಈ ಪ್ರಕರಣ ಸಂಬಂಧ ಮತ್ತು ಆರ್ಟಿ ನಗರದಲ್ಲಿ ನೆಲೆಸಿರುವ ಮತ್ತೋರ್ವ ಅಸ್ಟ್ರಾಲಜಿಸ್ಟ್ ಪುತ್ರನನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಿಗೂ ನಿಶಾಂತ್ಗೂ ಈ ಹಿಂದೆಯೇ ಪರಿಚಯವಿದ್ದು, ಸಾಕಷ್ಟು ವರ್ಷಗಳಿಂದ ರಾಹುಲ್ ಭಟ್, ಶಾಸಕರ ಪುತ್ರಿ ಮತ್ತು ನಿಶಾಂತ್ ಜೊತೆಯಲ್ಲಿಯೇ ಇದ್ದರು. ಶಾಸಕರ ಮಗಳಿಗೂ ನಿಶಾಂತ್ ಇಬ್ಬರು ಆಪ್ತ ಸ್ನೇಹಿತರಾಗಿದ್ದು, ಈ ಮಧ್ಯೆ ನಿಶಾಂತ್ ಬೇರೊಬ್ಬರ ಜೊತೆ ಓಡಾಟ ಶುರು ಮಾಡಿದ್ದರು. ಇದನ್ನು ಸಹಿಸಲಾಗದೇ ಎಸ್.ಟಿ ಸೋಮಶೇಖರ್ ಅವರ ಮಾಜಿ ಗನ್ ಮ್ಯಾನ್ ಬಳಸಿಕೊಂಡು ಈ ಕೃತ್ಯವೆಸಲಾಗಿದೆ ಎನ್ನಲಾಗುತ್ತಿದೆ.
ಸದ್ಯ ಈ ಪ್ರಕರಣ ಸಂಬಂಧ ಶಾಸಕರ ಪುತ್ರಿಯ ವಿಚಾರಣೆ ನಡೆಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.