ಬೆಂಗಳೂರು: ಮೈತ್ರಿ ಸರ್ಕಾರದ ಮತ್ತೆ ಕೆಲ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಬಿಜೆಪಿಯವರು ಇಷ್ಟು ಶಾಸಕರು ಸಾಕು ನಮಗೆ, ಆಪರೇಷನ್ ಕಮಲ ಬೇಡ ಎಂದಿದ್ದಾರೆ. ಹಾಗಾಗಿ ಉಳಿದ ಅತೃಪ್ತ ಶಾಸಕರಿಗೆ ಬಿಜೆಪಿ ಬಾಗಿಲು ಬಂದ್ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ವಿಜಯನಗರ ಶಾಸಕ ಆನಂದ್ ಸಿಂಗ್ ರಾಜೀನಾಮೆ ಬಳಿಕ ರಾಜ್ಯದಲ್ಲಿ ರಾಜೀನಾಮೆ ಪರ್ವವೇ ಆರಂಭಗೊಂಡಿತ್ತು. ಜುಲೈ 6ರಂದು 10 ಜನ ಅತೃಪ್ತರು ರಾಜೀನಾಮೆ ನೀಡಿದ ಬಳಿಕ ಹೊಸಕೋಟೆಯ ಶಾಸಕ ಎಂಟಿಬಿ ನಾಗರಾಜ್ ಮತ್ತು ಚಿಕ್ಕಬಳ್ಳಾಪುರದ ಶಾಸಕ ಕೆ.ಸುಧಾಕರ್ ರಾಜೀನಾಮೆ ನೀಡುವ ಮೂಲಕ ದೋಸ್ತಿಗಳಿಗೆ ಮತ್ತೆ ಶಾಕ್ ನೀಡಿದರು. ಈ ಎಲ್ಲ ಬೆಳವಣಿಗೆಗಳ ನಡುವೆ ಪಕ್ಷೇತರ ಶಾಸಕರಿಬ್ಬರು ಮೈತ್ರಿಗೆ ನೀಡಿದ ಬೆಂಬಲ ವಾಪಸ್ ಪಡೆದು ಕಮಲ ಹಿಡಿದಿದ್ದಾರೆ.
ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಯ ಕುರಿತು ಸುಪ್ರೀಂಕೋರ್ಟ್ ನ ಸಿಜೆಐ ಪೀಠ ಇಂದು ಬೆಳಗ್ಗೆ 10.30ಕ್ಕೆ ತನ್ನ ತೀರ್ಪು ಪ್ರಕಟಿಸಲಿದೆ. ತೀರ್ಪಿನ ಬಳಿಕ ಸರ್ಕಾರದ ಅಳಿವು-ಉಳಿವಿನ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಗಳಿವೆ.