ಮೈಸೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ತನ್ನತ್ತ ಸೆಳೆಯುವ ಕಾಂಗ್ರೆಸ್ ತಂತ್ರ ಫಲಿಸಿದೆ ಎನ್ನಲಾಗುತ್ತಿದೆ.
ಅಳಿಯನಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವ ಶ್ರೀನಿವಾಸ್ ಪ್ರಸಾದ್ ಪ್ರಯತ್ನ ವಿಫಲವಾಗಿದೆ. ಹೀಗಾಗಿ ಪಕ್ಷದ ನಡೆಗೆ ಪ್ರಸಾದ್ ಬೇಸರಗೊಂಡಿದ್ದಾರೆ. ಮೈಸೂರು, ಚಾಮರಾಜನಗರ ಕ್ಷೇತ್ರ ಗೆಲ್ಲಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್, ಇದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿದೆ.
ಟಿಕೆಟ್ ನೀಡದಿದ್ದರೂ ಪರವಾಗಿಲ್ಲ. ಸೌಜನ್ಯಕ್ಕಾದರೂ ಬಿಜೆಪಿ ನಾಯಕರು ನನಗೆ ಕರೆ ಮಾಡಿ ಮಾತನಾಡಬೇಕಿತ್ತು ಎಂದು ಆಪ್ತರ ಬಳಿ ಪಕ್ಷದ ನಡೆಗೆ ಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ. ಇದೇ ಬೇಸರದಲ್ಲಿರುವ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧಾರಿಸಿದ್ದಾರೆ ಎನ್ನಲಾಗುತ್ತಿದೆ.
ಚುನಾವಣೆ ಹೊತ್ತಿನಲ್ಲಿ ಕಾಂಗ್ರೆಸ್ಗೆ ಬೆಂಬಲ ಕೊಡುವ ವಿಚಾರದಲ್ಲಿ ಸದ್ಯಕ್ಕೆ ಗೌಪ್ಯತೆ ಕಾಪಾಡಿ. 15 ದಿನ ಸುಮ್ಮನ್ನಿರಿ, ಮತದಾನದ ಕೊನೆ ವಾರದಲ್ಲಿ ನನ್ನ ನಿರ್ಧಾರವನ್ನ ನಮ್ಮ ಅಭಿಮಾನಿಗಳಿಗೆ ಖಚಿತವಾಗಿ ಹೇಳುತ್ತೇನೆ ಎಂದು ಪ್ರಸಾದ್ ಗುಟ್ಟು ಬಿಟ್ಟು ಕೊಡದಂತೆ ಕಾಂಗ್ರೆಸ್ ನಾಯಕರಿಗೆ ಕಟ್ಟಾಪಣೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಶ್ರೀನಿವಾಸ ಪ್ರಸಾದ್ ಮಾತು ಕೇಳಿ ಕಾಂಗ್ರೆಸ್ ನಾಯಕರು ಖುಷಿಯಾಗಿದ್ದಾರೆ. ಪ್ರಸಾದ್ ಜೊತೆ ನಡೆದ ಎಲ್ಲಾ ಮಾತುಕತೆಗಳನ್ನ ಸ್ಥಳೀಯ ನಾಯಕರು ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ.
ಚಾಮರಾಜನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ಹೆಸರು ಘೋಷಣೆಯಾಗುತ್ತಿದ್ದಂತೆ ಸುನೀಲ್ ಬೋಸ್ ಅಲರ್ಟ್ ಆಗಿದ್ದಾರೆ. ಎಲ್ಲಾ ನಾಯಕರನ್ನು ಭೇಟಿಯಾಗಿ ಗೆಲುವಿಗೆ ಸಹಕಾರ ಕೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿದ್ದು ಕುತೂಹಲ ಮೂಡಿಸಿತ್ತು. ಸಚಿವ ಹೆಚ್.ಸಿ.ಮಹದೇವಪ್ಪ, ಯತೀಂದ್ರ ಸಿದ್ದರಾಮಯ್ಯ ಕೂಡ ಪ್ರಸಾದ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು.