– ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಭಾಗಿ
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಇಂದು (ಜ.28) ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ನಡೆಯಲಿದೆ.
ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಸಚಿವರು ಭಾಗಿಯಾಗಲಿದ್ದಾರೆ. ಇದೊಂದು ರೀತಿ ಸಿಎಂ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನದ ಸಮಾವೇಶ ಎಂದೇ ಬಿಂಬಿತವಾಗಿದ್ದು, ದಾವಣಗೆರೆಯಲ್ಲಿ ನಡೆದ ಲಿಂಗಾಯತ ಮಹಾಸಭಾ ಅಧಿವೇಶನಕ್ಕೆ ಠಕ್ಕರ್ ಕೊಡಲು ಆಯೋಜಿಸಿರುವ ಸಮಾವೇಶ ಎಂಬ ಚರ್ಚೆ ಸಹ ಶುರುವಾಗಿದೆ.
ಚಿತ್ರದುರ್ಗ ನಗರದ ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಮಠದ ಹಿಂಭಾಗದಲ್ಲಿ ಜರ್ಮನ್ ಮಾದರಿಯ ಬೃಹತ್ ಪೆಂಡಾಲ್ ವ್ಯವಸ್ಥೆ ಮಾಡಲಾಗಿದ್ದು, 2 ಲಕ್ಷಕ್ಕು ಅಧಿಕ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ಸಮಾವೇಶದಲ್ಲಿ `ಕಾಂತರಾಜ್’ ಆಯೋಗದ ವರದಿ ಜಾರಿ ಸೇರಿದಂತೆ ಸದಾಶಿವ ಆಯೋಗದ ವರದಿ ಅನುಷ್ಟಾನಗೊಳಿಸುವಂತೆ ಸಿಎಂಗೆ ಮನವಿ ಸಲ್ಲಿಸಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ.
2 ಲಕ್ಷ ಜನ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿದ್ದು, ಅಗತ್ಯ ಊಟೋಪಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲಾಗಿದೆ. ಮದ್ಯಾಹ್ನದ ಭೋಜನಕ್ಕಾಗಿ ಮಾಂಸಾಹಾರ ಹಾಗೂ ಸಸ್ಯಹಾರ ವ್ಯವಸ್ಥೆ ಮಾಡಲಾಗಿದೆ ಎಂದು ಸಮಾವೇಶದ ಉಸ್ತುವಾರಿಯಾದ ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ತಿಳಿಸಿದ್ದಾರೆ.
ಹಲವೆಡೆ ಮಾರ್ಗ ಬದಲಾವಣೆ:
ಸಮಾವೇಶದಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಸಂಚಾರದಲ್ಲಿ ವ್ಯತ್ಯವಾಗದಿರಲೆಂದು ಸಂಜೆ 6 ಗಂಟೆ ವರೆಗೆ ಹಲವೆಡೆ ಮಾರ್ಗ ಬದಲಾವಣೆ ಮಾಡಲಾಗಿದೆ. ಮುರುಘಾಮಠದಿಂದ ಸೀಬಾರ ಗ್ರಾಮದವರೆಗೆ ಸಂಚಾರ ನಿಷೇಧಗೊಳಿಸಿದ್ದು, ಸೀಬಾರ ಬಳಿಯ ಅಂಡರ್ ಪಾಸ್ ವರೆಗೂ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ಹಳೇ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಹ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದ್ದು, ರಾಷ್ಟ್ರೀಯ ಹೆದ್ದಾರಿ 48ರ ಬೈಪಾಸ್ ಮೂಲಕ ಸಂಚಾರಕ್ಕೆ ಸೂಚಿಸಿ ಡಿಸಿ ವೆಂಕಟೇಶ್ ಆದೇಶಿಸಿದ್ದಾರೆ.