ಬೆಂಗಳೂರು: ಶಿವರಾಜ್ ನಿರ್ದೇಶನ ಮಾಡಿರೋ ಉಡುಂಬಾ ಚಿತ್ರ ಕಡಲ ತಡಿಯ ರಗಡ್ ಕಥೆ ಹೊಂದಿದೆ ಅನ್ನೋದಕ್ಕೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ ಸಾಕ್ಷಿಯಾಗಿದೆ. ಅದರಲ್ಲಿ ತನಗಾದ ಅನ್ಯಾಯದ ವಿರುದ್ಧ, ಊರ ದುಷ್ಟರ ವಿರುದ್ಧ ಮುಗಿಬಿದ್ದು ಕಾದಾಡುವ ನಾಯಕನ ಮಾಸ್ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ ಈ ಕಥೆ ಕೇವಲ ಮಾಸ್ ಸನ್ನಿವೇಶಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಎದುರು ನಿಂತವರ ಪಕ್ಕೆ ಮುರಿಯುವಂತೆ ಎಗರಾಡೋ ಹುಂಬ ಉಡುಂಬಾನ ಸುತ್ತ ಎಂಥವರನ್ನಾದರೂ ಕಾಡುವಂಥಾ ಪ್ರೇಮ ಕಥಾನಕವೂ ಇದೆ.
ಪವನ್ ಶೌರ್ಯ ಉಡುಂಬಾ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಹುಲಿರಾಯ ಖ್ಯಾತಿಯ ಚಿರಶ್ರೀ ಅಂಚನ್ ನಾಯಕಿಯಾಗಿ, ಮುಗ್ಧ ಹುಡುಗಿಯಾಗಿ ಉಡುಂಬಾನಿಗೆ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಈ ಜೋಡಿಯ ಕಾಂಬಿನೇಷನ್ನಿನಲ್ಲಿ ಮೂಡಿಬಂದಿರೋ ಹಾಡುಗಳೆಲ್ಲವೂ ಸೂಪರ್ ಹಿಟ್ ಆಗಿವೆ. ಪವನ್ ಶೌರ್ಯ ಮತ್ತು ಚಿರಶ್ರೀ ಅಂಚನ್ ಸೂಪರ್ ಪೇರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಈ ಜೋಡಿಯಷ್ಟೇ ಮುದ್ದಾದ ಪ್ರೇಮ ಕಥೆಯೊಂದು ನಿಮಗಾಗಿ ಕಾಯುತ್ತಿದೆ.
ನಾಯಕನಾಗಿ ಪವನ್ ಶೌರ್ಯ ಅವರಿಗಿಲ್ಲಿ ಪಕ್ಕಾ ಸವಾಲಿನಂಥಾ ಪಾತ್ರಗಳಿವೆಯಂತೆ. ಉಡುಂಬನಾಗಿ ಅಬ್ಬರದ ನಟನೆ ಕೊಟ್ಟಿರುವ ಪವನ್ ಪಾಲಿಗೆ ಪ್ರೇಮಿಯಾಗಿ ಮತ್ತೊಂದು ಶೇಡಿನಲ್ಲಿ ಮುಗ್ಧತೆಯನ್ನು ಆವಾಹಿಸಿಕೊಂಡು ನಟಿಸುವ, ಪ್ರೇಮರಸವನ್ನು ತುಂಬಿಕೊಂಡು ತೆರೆ ಮೇಲೆ ಕಾಣಿಸಿಕೊಳ್ಳುವ ಸವಾಲೂ ಎದುರಾಗಿತ್ತು. ಅದನ್ನವರು ಅತ್ಯಂತ ಶ್ರದ್ಧೆಯಿಂದ ಎಲ್ಲರನ್ನೂ ಕಾಡುವಂತೆ ನಿರ್ವಹಿಸಿದ್ದಾರಂತೆ. ಅವರ ಪಾತ್ರ ಅದೆಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಅನ್ನೋದಕ್ಕೆ ಟ್ರೇಲರ್ಗೆ ಬಂದಿರೋ ಅಗಾಧ ಪ್ರಮಾಣದ ಪ್ರತಿಕ್ರಿಯೆಗಳೇ ಸಾಕ್ಷಿ.