ಬೆಂಗಳೂರು: ನಾಗರಬಾವಿಯಿಂದ ಸುಮನಹಳ್ಳಿಗೆ ಹೋಗುವ ಫ್ಲೈಓವರ್ ಮೇಲೆ ಗುಂಡಿಯಾಗಿದ್ದು, ಸುಮ್ಮನಹಳ್ಳಿಯ ಮೇಲ್ಸೇತುವೆಯನ್ನು ಬಂದ್ ಮಾಡಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಮಳೆ ಬಂದರೆ ರಸ್ತೆಗಳು ಕೆರೆಯಂತಾಗಿ ಗುಂಡಿಗಳಾಗುತ್ತೆ. ಆದರೆ ಈಗ ಮೇಲ್ಸೇತುವೆಯಲ್ಲಿ ಗುಂಡಿ ಬಿದ್ದಿದೆ. ಬರೀ ಗುಂಡಿ ಆದರೆ ತೇಪೆಹಾಕಿ ಮುಚ್ಚುತ್ತಾರೆ. ಆದರೆ ಇಡೀ ಬ್ರಿಡ್ಜ್ ಮೇಲೆ ವಾಹನ ಸಂಚಾರವನ್ನೇ ನಿಷೇಧ ಮಾಡಿದ್ದು ಯಾವಾಗ ಏನ್ ಅನಾಹುತ ಆಗೋತ್ತೋ ಅನ್ನೋ ಭಯ ಸಾರ್ವಜನಿಕರಲ್ಲಿ ಕಾಡುತ್ತಿದೆ.
ಮೇಲ್ಸೇತುವೆಯ ರಸ್ತೆಯಲ್ಲಿ ಸುಮಾರು 6 ಅಡಿ ಅಗಲದಷ್ಟು ಗುಂಡಿ ಬಿದ್ದಿದ್ದು ಬರೀ ಕಬ್ಬಿಣ ಮಾತ್ರ ಕಾಣುತ್ತಿದೆ. ಈ ರಸ್ತೆ ನಿರ್ಮಾಣವಾಗಿ ಇನ್ನೂ 10 ವರ್ಷಗಳು ಸಹ ಆಗಿಲ್ಲ ಆಗಲೇ ಈ ರೀತಿಯಾಗಿರೋದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಈಗ ಗುಂಡಿ ಬಿದ್ದ ಜಾಗದಲ್ಲಿ ಬ್ಯಾರಿಕೇಟ್ ವ್ಯವಸ್ಥೆ ಮಾಡಲಾಗಿದ್ದು, ಇದು ನಮ್ಮ ಬಿಬಿಎಂಪಿಯ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ಈ ಭಾಗದ ರಸ್ತೆ ಸಂಚಾರವನ್ನು ಪೊಲೀಸರು ಬಂದ್ ಮಾಡಿದ್ದು, ಪಬ್ಲಿಕ್ ಟಿವಿಯ ವರದಿಯ ಬೆನ್ನಲ್ಲೇ ಸ್ಥಳೀಯ ಬಿಬಿಎಂಪಿ ಸದಸ್ಯ ಮೋಹನ್ ಕುಮಾರ್ ಹಾಗೂ ಇಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಔಟರ್ ರಿಂಗ್ ರೋಡ್ ಬಂದ್ ಆಗಿದ್ದು, ಸರ್ವಿಸ್ ರೋಡ್ ನಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಬಿಬಿಎಂಪಿಯವರ ಈ ಕಳಪೆ ಕಾಮಗಾರಿಯಿಂದ ಬೆಳ್ಳಂ ಬೆಳಗ್ಗೆಯೇ ವಾಹನ ಸವಾರರು ಪರದಾಡುವಂತಾಗಿದೆ.