ಬಳ್ಳಾರಿ: ಮನೆಯವರು ಪ್ರೇಮ ವಿವಾಹಕ್ಕೆ ಒಪ್ಪದ ಹಿನ್ನೆಲೆ ಇಬ್ಬರು ಪ್ರೇಮಿಗಳು ಒಂದೇ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ನಡೆದಿದೆ.
ಮೃತ ಪ್ರೇಮಿಗಳನ್ನು ನಿಂಗಮ್ಮ (26) ಹಾಗೂ ಗುರುರಾಜ್ (30) ಎಂದು ಗುರುತಿಸಲಾಗಿದೆ. ನಿಂಗಮ್ಮ ಹಗರಿಬೊಮ್ಮನಹಳ್ಳಿ ತಾಲೂಕಿನ ಸೊನ್ನ ಗ್ರಾಮದವರು. ಗುರುರಾಜ್ ಹೂವಿನಹಡಗಲಿ ತಾಲೂಕಿನ ಚಿಲುಗೋಡ್ ಗ್ರಾಮದವನಾಗಿದ್ದಾನೆ. ಇಬ್ಬರು ಕಾಲೇಜಿನಲ್ಲಿ ಓದುವಾಗ ಪರಿಚಯವಾಗಿ, ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಇಬ್ಬರ ಜಾತಿ ಬೇರೆ ಬೇರಯಾದ ಹಿನ್ನೆಲೆಯಲ್ಲಿ ಮನೆಯವರು ಇವರ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಬುಧವಾರ ಇಬ್ಬರು ಮನೆಯಿಂದ ಓಡಿ ಹೋಗಿದ್ದಾರೆ. ಆದರೆ ಮನೆಯಿಂದ ಓಡಿ ಹೋದ ಈ ಜೋಡಿ ಗ್ರಾಮದ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಿನ ಜಾವ ಕುರಿಗಾರರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ವಿಷಯ ತಿಳಿದ ಹೂವಿನಹಡಗಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.