ಬೆಳಗಾವಿ: ಅಂಗನವಾಡಿ ಮಟ್ಟದಲ್ಲಿ ಇಂಗ್ಲಿಷ್ ಕಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಹಂತದಲ್ಲಿ ಸಭೆ ಮಾಡಲಾಗಿದೆ, ಇನ್ನೊಂದು ಸಭೆ ಬಳಿಕ ನಿರ್ಧಾರ ಪ್ರಕಟಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಗಳಲ್ಲಿ ಆರಂಭಿಸಬೇಕೆಂಬ ಚಿಂತನೆ ನಡೆದಿತ್ತು. ಹೀಗೆ ಮಾಡಿದರೆ ಅಂಗನವಾಡಿಗೆ ಮಕ್ಕಳು ಬರುವುದು ಕಡಿಮೆ ಆಗುತ್ತೆ ಎಂಬುದು ಗಮನಕ್ಕೆ ಬಂದಿದ್ದು, ಹೀಗಾಗಿ ಅಂಗನವಾಡಿಯಲ್ಲಿ ಇಂಗ್ಲಿಷ್ ಕಲಿಕೆ ನೀಡಬೇಕೆಂಬ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಉಪಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಮಾಜಿ ಶಾಸಕ ರಾಜು ಕಾಗೆ ಕಾಡಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನ ತಿರಸ್ಕಾರ ಮಾಡಿಲ್ಲ. ಅಸಮಾಧಾನ ಇರುವುದು ಸಹಜ ಅದನ್ನು ವರಿಷ್ಠರು ಸರಿ ಪಡಿಸುತ್ತಾರೆ ಎಂದು ಸಚಿವ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.